ಯಾದಗಿರಿ: ‘ಆಡಳಿತ ಸೇವೆಗೆ ಬರುವಾಗಲೇ ಸೇವಾ ಮನೋಭಾವದಿಂದ ಬಂದಿದ್ದೇನೆ. ಹೀಗಾಗಿ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲಾಗುತ್ತಿಲ್ಲ ಎನ್ನುವ ಮಾತು ದೂರ ಉಳಿಯಿತು. ಜಿಲ್ಲೆ ಕೊರೊನಾ ಮುಕ್ತವಾದರೆ ಅದಕ್ಕಿಂತ ಬೇರೆ ಸಂತೋಷವಿಲ್ಲ. ಕೊರೊನಾದೊಂದಿಗೆ ನಮ್ಮ ಹೋರಾಟ ನಿರಂತರವಾಗಿ ಇರಲಿದೆ’.
ಹಿಂಗಂತ ಹೇಳಿದವರು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್. ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅವರು,‘ಕಚೇರಿ, ಸಭೆ–ಸಮಾರಂಭ ಸೇರಿದಂತೆ ಎಲ್ಲಿಗೇ ಹೋದರೂ ಮೊದಲು ಅಂತರ ಪಾಲಿಸುತ್ತೇನೆ. ಕಡ್ಡಾಯವಾಗಿ ಮಾಸ್ಕ್ ಧರಿಸುತ್ತೇನೆ. ಆಗಾಗ ಸ್ಯಾನಿಟೈಸರ್ ಬಳಸುತ್ತೇನೆ. ಈ ಮೂರು ಸೂತ್ರಗಳನ್ನು ಜಿಲ್ಲೆಯ ಜನತೆಯೂ ಪಾಲಿಸಬೇಕು ಎಂದು ಕೋರುತ್ತೇನೆ ಎಂದು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.
‘ಕೋವಿಡ್–19 ನಮಗೆ ಸೇವೆ ಮಾಡಲು ಅವಕಾಶ ಕಲ್ಪಿಸಿದೆ. ಜೊತೆಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸವಾಲು ಇದೆ. ಹೀಗಾಗಿ ನಮ್ಮ ಸಿಬ್ಬಂದಿಗೂ ಮೊದಲು ನಿಮ್ಮ ಸುರಕ್ಷತೆ ಮುಖ್ಯ ಎಂದು ಆಗಾಗ ಹೇಳುತ್ತೇನೆ. ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಏರಿಕೆಯಾಗುತ್ತಿವೆ. ಆದರೆ, ನಮಗೆ ಸಂಖ್ಯೆ ಮುಖ್ಯವಲ್ಲ. ಅದು ಎಲ್ಲಿಯವರಿಂದ ಬಂದಿದೆ ಎನ್ನುವುದನ್ನು ಪತ್ತೆ ಹಚ್ಚಿ ಗುಣಪಡಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಗಂಟಲು ದ್ರವ ಟೆಸ್ಟಿಂಗ್ ಕೂಡ ಜಾಸ್ತಿ ಮಾಡಲಾಗುತ್ತಿದೆ. ಹೀಗಾಗಿ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಇದರಿಂದ ಮುಂದೆ ಆಗಬಹುದಾದ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.