ಯಾದಗಿರಿ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಜಿಲ್ಲೆಯ ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕಗೆ ಸೇರಿದ ಐದು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ಮಾಡಿ ಹಣ, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಂದಾರ ನೇತೃತ್ವದಲ್ಲಿ ಟಿಎಚ್ಒ ಕಚೇರಿ, ಅದಿತಿ ಹೊಟೇಲ್, ಪೆಟ್ರೋಲ್ ಬಂಕ್, ಖಾಸಗಿ ಆಸ್ಪತ್ರೆ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುರಪುರ ನಗರದಲ್ಲಿರುವ ಡಾ.ಆರ್.ವಿ.ನಾಯಕ ಮನೆ, ಕಲಬುರಗಿಯ ಮನೆ ಮೇಲೂ ದಾಳಿ ಮಾಡಲಾಗಿದೆ.
ಭರ್ಜರಿ ಬೇಟೆ:
ಲೋಕಾಯುಕ್ತರ ದಾಳಿ ವೇಳೆ ಸುರಪುರ ನಗರದ ಮನೆಯಲ್ಲೇ ಇದ್ದ ಡಾ.ಆರ್.ವಿ.ನಾಯಕ, ಅಂದಾಜು ಸ್ಥಿರ ಆಸ್ತಿಗಳ ಮೌಲ್ಯ ₹11.5 ಕೋಟಿ ಆಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
11 ನಿವೇಶನಗಳ ಮೌಲ್ಯ ₹45 ಲಕ್ಷ, 2 ಮನೆಗಳಿದ್ದು, ₹3 ಕೋಟಿ ಮೌಲ್ಯ ಹೊಂದಿವೆ. 13 ಎಕರೆ ಕೃಷಿ ಭೂಮಿ ಇದ್ದು, ₹20 ಲಕ್ಷ ಮೌಲ್ಯ ಹೊಂದಿವೆ.
ಇದರ ಜೊತೆಗೆ ₹40 ಮೌಲ್ಯದ ಒಂದು ಪೆಟ್ರೋಲ್ ಬಂಕ್, ಖಾಸಗಿ ನರ್ಸಿಂಗ್ ಹೋಂ ₹1.5 ಕೋಟಿ, ಖಾಸಗಿ ಲಾಡ್ಜ್ ಮತ್ತು ಬಾರ್ ಮೌಲ್ಯ ₹5.5 ಕೋಟಿ, ಚರ ಆಸ್ತಿ ₹1.54 ಕೋಟಿ, ದಾಳಿ ವೇಳೆ ₹4.10 ಲಕ್ಷ, ₹60 ಲಕ್ಷ ಮೌಲ್ಯದ ಆಭರಣಗಳು, ₹70 ಲಕ್ಷ ಮೌಲ್ಯದ ಕಾರು ಸೇರಿದಂತೆ ಇತರೆ ₹20 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಡಾ.ಆರ್.ವಿ.ನಾಯಕ ಒಟ್ಟು ₹ 9.87 ಕೋಟಿ, ಶೇ 274.3ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ದಾಳಿ ವೇಳೆ ಡಿವೈಎಸ್ಪಿ ಎಸ್.ಹೊಸಮನಿ, ಪಿಐಗಳಾದ ಬಾಬಾಸಾಹೇಬ ಪಾಟೀಲ, ರಾಜಶೇಖರ ಹಲಗೋಡಿ, ಸಂತೋಷ ರಾಠೋಡ, ಸಿದ್ದಯ್ಯ ಬೈರೋಗಿ, ಸಂಗಮೇಶ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.