ಸೈದಾಪುರ: ಪಟ್ಟಣದಲ್ಲಿ ಮಹಾ ಶಿವರಾತ್ರಿ ಹಬ್ಬದ ಜಾಗರಣೆ ದಿನವಾದ ಗುರುವಾರ ಹಬ್ಬದ ಪೂಜೆಗೆ ಬೇಕಾದ ಸಾಮಗ್ರಿಗಳ ಮತ್ತು ಹಣ್ಣುಗಳ ವ್ಯಾಪಾರ ವಹಿವಾಟು ಬಿಸಿಲಿನ ಮಧ್ಯೆಯೂ ಜೋರಾಗಿ ನಡೆಯಿತು.
ಪಟ್ಟಣದಲ್ಲಿ ಮಹಾ ಶಿವರಾತ್ರಿಯ ಹಬ್ಬದ ಜಾಗರಣೆ ದಿನ ಜನಸಂದಣಿ ಹೆಚ್ಚಿದ್ದು, ವ್ಯಾಪಾರ ವಹಿವಾಟು ಇತರ ದಿನಗಳಿಗಿಂತ ಹೆಚ್ಚಾಗಿತ್ತು. ನಾನಾ ಗ್ರಾಮಗಳಿಂದ ಬಂದ ಜನ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು. ತರಕಾರಿ ಮಾರುಕಟ್ಟೆಯಿಂದ ಕನಕ ವೃತ್ತ ಹಾಗೂ ರೈಲು ನಿಲ್ದಾಣದಿಂದ ಬಸವೇಶ್ವರ ವೃತದವರೆಗೆ ಜನಸಂದಣಿ ತುಂಬಿಕೊಂಡಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡೆತಡೆಯುಂಟಾಗಿ ಸಮಸ್ಯೆಯೂ ಎದುರಾಗಿತ್ತು.
ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳ ಬೆಲೆಯಲ್ಲೂ ಏರಿಕೆಯಾಗಿತ್ತು. ಒಂದೆಡೆ ಶಿವರಾತ್ರಿಯ ಜಾಗರಣೆ, ಇನ್ನೊಂದಡೆ ಕೆಲವು ಗ್ರಾಮಗಳ ಜಾತ್ರೆ ಪ್ರಯುಕ್ತ ಪಟ್ಟಣದ ರಸ್ತೆಗಳು ಕಿಕ್ಕಿರಿದಿದ್ದು ಊಟಕ್ಕೂ ಪುರುಸೋತ್ತಿಲ್ಲದಂತೆ ವ್ಯಾಪಾರ ಮಾಡುವಂತಾಯಿತು ಎಂದು ಹಣ್ಣಿನ ವ್ಯಾಪಾರಿ ಅಂಜನೇಯ ತಿಳಿಸಿದರು.
ಮಹಾ ಶಿವರಾತ್ರಿ ಜಾಗರಣೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಾರಾಟಕ್ಕಿಟ್ಟಿದ್ದ ಕಲ್ಲಂಗಡಿ ಒಂದರ ಬೆಲೆ ಸುಮಾರು ₹40 ರಿಂದ ₹100 ಗಡಿ ದಾಟಿತ್ತು. ಒಂದು ಡಜನ್ ಬಾಳೆ ಹಣ್ಣಿಗೆ ₹40 ರಂತೆ ಮಾರಾಟ ಮಾಡಲಾಗುತ್ತಿತ್ತು. ಸೇಬು, ಬಾಳೆಹಣ್ಣು, ಮೋಸಂಬಿ, ದ್ರಾಕ್ಷಿ ಬೆಲೆಗಳಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಆದರೂ ಜನ ಖರೀದಿಗೆ ಹಿಂಜರಿಯುತ್ತಿಲ್ಲ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.