ಯಾದಗಿರಿ: ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು ನವೆಂಬರ್ 15 ರಂದು ಧರಣಿ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಚ್ಚರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಇಲ್ಲಿನ ನಗರ ಪೋಲಿಸ್ ಠಾಣೆ ಪಿಎಸ್ಐ ಬಾಪುಗೌಡ ಪಾಟೀಲ ಅವರಿಗೆಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಪುಗೌಡ ಪಾಟೀಲರನ್ನು ಅಮಾನತು ಮಾಡುವಂತೆ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರಅಕ್ಟೋಬರ್ನಲ್ಲಿಮೂರುದಿನ ನಡೆಸಿದ್ದ ಪ್ರತಿಭಟನೆಗೆ ದೇವೇಗೌಡರೂ ಸಾಥ್ ನೀಡಿ ಜೆಡಿಎಸ್ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ದೇವೇಗೌಡರ ಒತ್ತಡಕ್ಕೆ ಮಣಿದ ಯಡಿಯೂರಪ್ಪ ಅವರು ಬಾಪುಗೌಡ ಪಾಟೀಲ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಅಕ್ಟೋಬರ್ 5 ರಂದು ಪ್ರವಾಹ ಪೀಡಿತ ಪ್ರದೇಶಗಳ ಸ್ಥಳ ಪರಿಶೀಲನೆಗೆಂದು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮಾರ್ಗದಲ್ಲಿ ಅವರ ಕಾರಿಗೆ ಜೆಡಿಎಸ್ ಕಾರ್ಯಕರ್ತರು ಕಪ್ಪುಬಟ್ಟೆಪ್ರದರ್ಶನ ಮಾಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಬಾಪುಗೌಡ ಪಾಟೀಲರು ಯರಗೋಳ ಗ್ರಾಮದ ಮಾರ್ಥಂಡಪ್ಪ ಮಾನೆಗಾರ ಸೇರಿದಂತೆ 7 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದರು.
ಕಪ್ಪು ಬಟ್ಟೆ ಪ್ರದರ್ಶನದ ಹಿಂದೆ ಶರಣಗೌಡ ಕಂದಕೂರ ಪ್ರಚೋದನೆ ಇದೆ ಎಂದು ಸಂಶಯ ವ್ಯಕ್ತಪಡಿಸಿ ಕೆಲ ಕಾರ್ಯಕರ್ತರನ್ನು ಪಿಎಸ್ಐ ಅವರು ಠಾಣೆಗೆ ಕರೆಸಿ ವಿಚಾರಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆ. ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಶರಣಗೌಡ ಕಂದಕೂರ ಠಾಣೆ ಎದುರು ಮೂರು ದಿನ ಉಪವಾಸ ಧರಣಿ ನಡೆಸಿದ್ದರು.
***
ಪಿಎಸ್ಐ ಬಾಪುಗೌಡ ಪಾಟೀಲ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ನಮಗೆ ಯಾವುದೇ ಆದೇಶ ಬಂದಿಲ್ಲ. ಬಂದ ನಂತರ ತಿಳಿಸಲಾಗುವುದು.
– ಋಷಿಕೇಶ್ ಭಗವಾನ ಸೋನವಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
***
ಪಿಎಸ್ಐಗೆ ರಜೆ ಮೇಲೆ ಹೋಗಬೇಕು ಎನ್ನುವುದು ಇದು ಒಂದು ರೀತಿ ಶಿಕ್ಷೆ ಇದ್ದಂತೆ.
– ನಾಗನಗೌಡ ಕಂದಕೂರ, ಗುರುಮಠಕಲ್ ಶಾಸಕ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.