ADVERTISEMENT

ಯಾದಗಿರಿ | ‘ಶೋಷಿತ ಸಮಾಜ ಸ್ವಾಭಿಮಾನದಿಂದ ಬಾಳಿ’

21 ಜೋಡಿಗಳಿಗೆ ಕಂಕಣ ಭಾಗ್ಯ, ಡಾ.ಜಿ.ಪರಮೇಶ್ವರ್ ಯುವ ಸೈನ್ಯದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:33 IST
Last Updated 26 ಜೂನ್ 2022, 5:33 IST
ಶಹಾಪುರದಲ್ಲಿ ಶನಿವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ಮಾತನಾಡಿದರು. ಶಾಸಕ ಶರಣಬಸಪ್ಪ ದರ್ಶನಾಪುರ ಇದ್ದರು
ಶಹಾಪುರದಲ್ಲಿ ಶನಿವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ಮಾತನಾಡಿದರು. ಶಾಸಕ ಶರಣಬಸಪ್ಪ ದರ್ಶನಾಪುರ ಇದ್ದರು   

ಶಹಾಪುರ: ‘ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಸಮಾಜದಲ್ಲಿ ಸಾಮರಸ್ಯಕ್ಕೆ ನಾಂದಿ ಆಗುತ್ತದೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಿಸಿದರು.

ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಜರುಗಿದ 21 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಕಲ್ಯಾಣ ನಾಡಿನಲ್ಲಿ ಸಮಾನತೆಯ ತತ್ವಸಾರಿ ಸರ್ವರನ್ನು ಒಂದುಗೂಡಿಸುವ ಸಾರ್ಥಕ ಕಾರ್ಯವನ್ನು ಬಸವಣ್ಣ ಮಾಡಿದವರು. ಶೋಷಿತ ಸಮಾಜ ಸ್ವಾಭಿಮಾನದಿಂದ ಬಾಳಬೇಕು ಎಂದು ಹಗಲಿರುಳು ದುಡಿದು ಸಮಾಜಕ್ಕೆ ಹೊಸಬೆಳಕು ನೀಡಿದ ಡಾ.ಬಿ.ಆರ್.ಅಂಬೇಡ್ಕರ್‌ ಆಶಯದಂತೆ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ಸಮಾಜಮುಖಿ ಕಾರ್ಯದಲ್ಲಿ ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ ಕಲ್ಯಾಣ ನಾಡಿನ ಶರಣರ ದಾರ್ಶನಿಕರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಶೋಷಿತ ಸಮುದಾಯಗಳು ಸುಸ್ಥಿತಿಗೆ ಬರಬೇಕಾದರೆ ಶಿಕ್ಷಣವೊಂದೇ ರಾಜಮಾರ್ಗವಾಗಿದೆ. ಸಂವಿಧಾನದ ಆಶಯಗಳನ್ನು ಗೌರವಿಸಿ ಸರ್ವರು ಶಾಂತಿ ಸಹನೆಯಿಂದ ಬಾಳಬೇಕು ಎಂದರು.

ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಆರ್ಥಿಕ ಹೊರೆಯಿಂದ ಹೊರ ಬರುತ್ತವೆ. ಮದುವೆಯ ದುಂದು ವೆಚ್ಚಕ್ಕೆ ಮಾಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ. ತಾಲ್ಲೂಕಿನಲ್ಲಿ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ಕಾರ್ಯ ಮೆಚ್ಚುಗೆಯಾಗಿದೆಎಂದರು.

ಹುಬ್ಬಳ್ಳಿ-ಧಾರವಾಡ ಶಾಸಕ ಪ್ರಸಾದ್ ಅಬ್ಬಯ್ಯ, ಸಾನ್ನಿಧ್ಯ ವಹಿಸಿದ್ದ ಪೂಜ್ಯ ಭಂತೆ ಆದಿತ್ಯ, ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಡಾ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನವದಂಪತಿಗಳಿಗೆ ಶುಭ ಹಾರೈಸಿದರು.

ನಟ, ನಿರ್ದೇಶಕ ಪವನ್ ಒಡೆಯರ್, ಕಾಂಗ್ರೆಸ್‌ ಮುಖಂಡರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ, ಜಗನ್ನಾಥ ಗುತ್ತೇದಾರ್, ಸಿದ್ಧರಾಜು, ಜಯರಾಮ್, ಜಗದೀಶ್, ನಜೀರ್ ಅಹಮದ್, ನೀಲಕಂಠ ಬಡಿಗೇರ, ರಾಮಣ್ಣ ಸಾದ್ಯಾಪುರ, ಶಿವಪುತ್ರ ಜವಳಿ, ಶಿವಕುಮಾರ ತಳವಾರ್, ಶಂಕರ ಸಿಂಘೆಇದ್ದರು.

ಯುವ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ನಗುತಾ ರಂಗನಾಥ, ಸೈದಪ್ಪ ಢಂಗೆ, ಮೌನೇಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಆರಬೋಳ, ಶ್ರೀಧರ್ ಇಂಗಿನಕಲ್, ಶರಣು ದೋರನಹಳ್ಳಿ, ವಿಶ್ವ ನಾಟೇಕಾರ, ಚಂದ್ರನಾಥ ಹತ್ತಿಗೂಡರ್, ರಾಜು ಅಣಬಿ, ಗಂಗಾಧರ ಹೊಟ್ಟಿ ಸೇರಿದಂತೆ ಜಿ. ಪರಮೇಶ್ವರ ಅಭಿಮಾನಿಗಳುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.