
ವಡಗೇರಾ: ‘ಒತ್ತಡದ ಜೀವನದಿಂದ ಮುಕ್ತಿ ಹಾಗೂ ಮಾನಸಿಕ ನೆಮ್ಮದಿ ಪಡೆಯಲು ನಿತ್ಯ ಯೋಗ– ಧ್ಯಾನ ಮಾಡಬೇಕು’ ಎಂದು ಸಂಗಮೇಶ್ವರ ಮಠದ ಪೀಠಾಧಿಪತಿ ಕರುಣೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ತ್ರಿವಿಧ ದಾಸೋಹಿ ಶಿವಕುಮಾರ ಶಿವಯೋಗಿಗಳ 6ನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಯುವಕರು ಗೋವು, ಧರ್ಮ ಹಾಗೂ ದೇಶ ರಕ್ಷಣೆಗೆ ಮುಂದಾಗಬೇಕು. ತುರ್ತು ಸಮಯದಲ್ಲಿ ದೇಶಕ್ಕೆ ಯುವಕರ ಅವಶ್ಯಕತೆ ಬಹಳ ಇದೆ, ಯುವ ಜನತೆ ಆದಷ್ಟು ಸದೃಢವಾದ ದೇಹ ಹೊಂದಬೇಕು ಯಾವುದೇ ಕಾರಣಕ್ಕೂ ನಕಾರಾತ್ಮಕ ಚಿಂತೆನೆ ಮಾಡಬಾರದು, ಅದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ’ ಎಂದು ಹೇಳಿದರು.
‘ಮಗು ಅಳುತಿದ್ದರೆ ತಾಯಂದಿರು ಮೊಬೈಲ್ ಕೊಟ್ಟು ಸುಮ್ಮನಿರಿಸುತ್ತಾರೆ, ಆದರೆ ಇದರಿಂದ ಮಕ್ಕಳ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ತಾಯಂದಿರು ತಮ್ಮ ಮಕ್ಕಳ ಕೈಗೆ ಮೊಬೈಲ್ ನೀಡಬಾರದು’ ಎಂದು ಸಲಹೆ ನೀಡಿದರು.
ದೇವಸೂಗೂರಿನ ವೀರಭದ್ರಯ್ಯ ಸ್ವಾಮೀಜಿ ಮಾತನಾಡಿದರು.
ರುಣೇಶ್ವರ ಸಾಮೀಜಿಗೆ ಚಿಕ್ಕಸೂಗೂರಿನ ಈರಮ್ಮ ಈಶಪ್ಪಗೌಡ ದಂಪತಿ ನಾಣ್ಯಗಳಿಂದ ತುಲಾಭಾರ ಮಾಡಿದರು.
ಪುರಾಣ ಪ್ರವಚನವನ್ನು ಶರಭಯ್ಯ ಶಾಸ್ತ್ರಿ ನೆರವೇರಿಸಿದರು. ಶಿವರುದ್ರಯ್ಯ ಶಾಸ್ತ್ರಿ ನಿರೂಪಿಸಿದರು. ಶಿಕ್ಷಕ ಮೌನೇಶ ಶಿವಪುರ ವಂದಿಸಿದರು.
ಈ ಸಂರ್ಭದಲ್ಲಿ ಸಂಗೀತ ಬಳಗದವರು ಹಾಗೂ ಭಕ್ತರು ಉಪಸ್ಥಿತರಿದ್ದರು.
ತೆಲಂಗಾಣ ಸಚಿವರಿಗೆ ಆಹ್ವಾನ
ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಗಳ ಪುರಾಣದ ಮಹಾಮಂಗಲ ಹಾಗೂ ಧರ್ಮಸಭೆ ಜ.12 ರಂದು ನಡೆಯಲಿದೆ. ಸಮಾರಭಕ್ಕೆ ತೆಲಂಗಾಣದ ಪಶು ಸಂಗೋಪನೆ ಮೀನುಗಾರಿಕೆ ಹಾಗೂ ಕ್ರೀಡಾ ಇಲಾಖೆಯ ಸಚಿವ ವಾಕಿಟಿ ಶ್ರೀಹರಿ ಅವರಿಗೆ ಸಂಗಮೇಶ್ವರ ದೇವಸ್ಥಾನ ಸಮಿತಿಯವರು ಆಹ್ವಾನ ಪತ್ರಿಕೆ ನೀಡಿದರು. ‘ಖಂಡಿತವಾಗಿ ಸಮಾರಂಭಕ್ಕೆ ಬರುತ್ತೇನೆ’ ಎಂದು ವಾಕಿಟಿ ಶ್ರೀಹರಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.