ಕೆಂಭಾವಿ: ಬೆಂಬಲ ನೀಡಿ ಈ ಬಾರಿ ರೈತರಿಂದ ಸರ್ಕಾರ ನೇರವಾಗಿ ಹತ್ತಿ ಖರೀದಿ ಮಾಡುತ್ತಿದ್ದು, ಈ ಭಾಗದ ರೈತರು ಇದರ ಲಾಭ ಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ರೈತರಿಗೆ ಮನವಿ ಮಾಡಿದರು.
ಹದನೂರ ಗ್ರಾಮದಲ್ಲಿ ಶನಿವಾರ ಖಾಸಗಿ ಹತ್ತಿ ಕಾರ್ಖಾನೆಯಲ್ಲಿ ಪ್ರಾರಂಭವಾದ ಹತ್ತಿ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಅದರಲ್ಲೂ ಕಲಬುರಗಿ, ರಾಯಚೂರ, ಯಾದಗಿರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಹತ್ತಿಯನ್ನು ಮಾರಾಟ ಮಾಡಲು ಪ್ರತಿ ವರ್ಷ ಈ ಭಾಗದ ರೈತರು ಹರ ಸಾಹಸ ಪಡುತ್ತಿದ್ದರು. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಭಾಗದ ಹಲವು ಖಾಸಗಿ ಹತ್ತಿ ಕಾರ್ಖಾನೆಗಳ ಜೊತೆ ಸರ್ಕಾರ ಕೈಜೋಡಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಂಬಲ ನೀಡಿ ಹತ್ತಿ ಖರೀದಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು. ಭಿ.ಗುಡಿ, ಗೋಗಿ, ಹದನೂರ ಸೇರಿದಂತೆ ಜಿಲ್ಲೆಯಲ್ಲಿ ಹಲವು ಖಾಸಗಿ ಹತ್ತಿ ಕಾರ್ಖಾನೆಗಳಲ್ಲಿ ರೈತರಿಂದ ನೇರವಾಗಿ ಹತ್ತಿ ಖರೀದಿಗೆ ವ್ಯವಸ್ಥೆ ಮಾಡಿದ್ದು ರೈತರು ಇದರ ಲಾಭ ಪಡೆಯುವಂತೆ ಹೇಳಿದರು.
ಗ್ರಾಮ ಪಂಚಾಯೊತಿ ಉಪಾಧ್ಯಕ್ಷ ಪ್ರಶಾಂತಗೌಡ, ರಾಮನಗೌಡ ಹದನೂರ, ಶಿವಮಹಾಂತ ಚಂದಾಪೂರ, ಎಮ್. ಎಸ್. ಪಟ್ಟಣಶೆಟ್ಟಿ, ಗೌಡಪ್ಪಗೌಡ ವಣಕ್ಯಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.