ಸುರಪುರ: ಶಾಸಕ ಹಾಗೂ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮದ ಅಧ್ಯಕ್ಷ ರಾಜೂಗೌಡ ಗುರುವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ₹ 1.26 ಕೋಟಿ ವೆಚ್ಚದ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಮಿಷನ್ ಯೋಜನೆಯಡಿಯಲ್ಲಿ ಚಿಗರಿಹಾಳ ಗ್ರಾಮದಲ್ಲಿ ₹ 40 ಲಕ್ಷ, ಮಂಗಳೂರು ₹57 ಲಕ್ಷ, ಮಾವಿನಮಟ್ಟಿ ₹21 ಲಕ್ಷ ಮತ್ತು ಹಾಳ ಅಮ್ಮಾಪುರ ಗ್ರಾಮದಲ್ಲಿ ₹8 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಪ್ರತ್ಯೇಕವಾಗಿ ಭೂಮಿ ಪೂಜೆ ನೆರವೇರಿಸಿದರು.
‘ಇಲಾಖೆಯವರು ಎಲ್ಲ ಗ್ರಾಮಗಳಲ್ಲಿ ಉತ್ತಮವಾಗಿ ಕಾಮಗಾರಿ ನಿರ್ವಹಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಪ್ರತಿಯೊಂದು ಮನೆಗೂ ನೀರು ಒದಗಿಸುವುದು ಜಲ ಜೀವನ ಮಿಷನ್ ಯೋಜನೆಯ ಗುರಿಯಾಗಿದೆ. ಪ್ರತಿಯೊಬ್ಬರು ಶುದ್ಧವಾದ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ರಾಜೂಗೌಡ ಸಲಹೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಹಣಮಂತಪ್ಪ ಅಂಬ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ(ತಾತಾ), ಪ್ರಮುಖರಾದ ಎಚ್.ಸಿ.ಪಾಟೀಲ್, ದೊಡ್ಡ ದೇಸಾಯಿ ದೇವರಗೋನಾಲ, ಶಾಂತಗೌಡ ಚನ್ನಪಟ್ಟಣ, ಭೀಮಣ್ಣ ಬೇವಿನಾಳ ಸೇರಿದಂತೆ ಆಯಾ ಗ್ರಾಮಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.