ADVERTISEMENT

ಸುರಪುರ ಶಾಸಕ ರಾಜೂಗೌಡರಿಗೆ ಪಿತೃ ವಿಯೋಗ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 12:31 IST
Last Updated 1 ಜನವರಿ 2022, 12:31 IST
ಶಂಭನಗೌಡ ಪಾಟೀಲ
ಶಂಭನಗೌಡ ಪಾಟೀಲ   

ಸುರಪುರ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ನರಸಿಂಹನಾಯಕ (ರಾಜೂಗೌಡ) ಅವರ ತಂದೆ ಶಂಭನಗೌಡ ಧರ್ಮಗೌಡ ಪಾಟೀಲ (78) ಶನಿವಾರ ಇಲ್ಲಿನ ಅವರ ನಿವಾಸದಲ್ಲಿ ನಿಧನ ಹೊಂದಿದರು.

ಮೃತರಿಗೆ ಶಾಸಕ ರಾಜೂಗೌಡ ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಭಾನುವಾರ ಮಧ್ಯಾಹ್ನ ಹುಣಸಗಿ ತಾಲ್ಲೂಕಿನ ಕೊಡೇಕಲ್ ಗ್ರಾಮದ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ಅಬಕಾರಿ ಇಲಾಖೆಯ ಡಿವೈಎಸ್‍ಪಿಯಾಗಿ 2004ರಲ್ಲಿ ನಿವೃತ್ತರಾಗಿದ್ದರು. ರಾಜೂಗೌಡ ಅವರ ರಾಜಕೀಯ ಜೀವನದಲ್ಲಿ ಉತ್ತಮ ಮಾರ್ಗದರ್ಶಕರೂ ಆಗಿದ್ದರು. ಎರಡು ವರ್ಷಗಳ ಹಿಂದೆ ಪತ್ನಿ ತಿಮ್ಮಮ್ಮ ಗೌಡಸಾನಿ ಅವರು ನಿಧನ ಹೊಂದಿದ್ದರು. ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ನಿವಾಸಕ್ಕೆ ಮರಳಿದ್ದರು. ಇಂದು ಬೆಳಗ್ಗೆ ಉಪಾಹಾರ ಸೇವಿಸಿ ನಿದ್ರೆಗೆ ಜಾರಿದಾಗ ಮೃತಪಟ್ಟಿದ್ದಾರೆ.

ADVERTISEMENT

ಅಂತಿಮ ದರ್ಶನ: ಶಾಸಕರ ನಿವಾಸದಲ್ಲಿ ಶನಿವಾರ ಸಂಜೆಯಿಂದ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಅರಸು ಮನೆತನದ ಡಾ. ರಾಜಾ ಕೃಷ್ಣಪ್ಪ ನಾಯಕ, ರಾಜಾ ಲಕ್ಷ್ಮಿನಾರಾಯಣ ನಾಯಕ, ದೇವಪುರ ಜಡೇಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯರು, ಯಾದಗಿರಿಯ ಮಾಜಿ ಶಾಸಕ ಡಾ. ವೀರಬಸಂತ ರೆಡ್ಡಿ ಮುದ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಡಿವೈಎಸ್‍ಪಿ ಡಾ. ದೇವರಾಜ್, ತಹಶೀಲ್ದಾರಾದ ಸುಬ್ಬಣ್ಣ ಜಮಖಂಡಿ, ಅಶೋಕ ಸುರಪುರಕರ್, ರಾಜಕೀಯ ಮುಖಂಡರಾದ ಡಾ. ಸುರೇಶ ಸಜ್ಜನ್, ಬಸವರಾಜಸ್ವಾಮಿ ಸ್ಥಾವರಮಠ, ಎಚ್.ಸಿ. ಪಾಟೀಲ್, ಯಲ್ಲಪ್ಪ ಕುರಕುಂದಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು, ಗಣ್ಯರು, ಶಾಸಕರ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.