ADVERTISEMENT

ಯಾದಗಿರಿ: ಗಂಡನ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರ ಸೆರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 16:03 IST
Last Updated 6 ಜನವರಿ 2020, 16:03 IST

ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಬೇರೆಡೆ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಆಕೆಯ ಪ್ರಿಯಕರನ್ನು 11 ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ಅಶ್ವಿನಿ, ಶಶಿಕುಮಾರ ಬಂಧಿತರು. ಜಗನ್ನಾಥ ಕೊಲೆಯಾಗಿರುವವರು.

ಘಟನೆ ವಿವರ

ADVERTISEMENT

ಯಾದಗಿರಿಯ ಜಗನ್ನಾಥ ಎನ್ನುವವರನ್ನು ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಶಶಿಕುಮಾರ 2019ರ ಫೆಬ್ರವರಿ 22ರಂದು ಕೊಲೆ ಮಾಡಿ, ಬಳಿಕ ಶವವನ್ನು ಕಾರಿನಲ್ಲಿ ಹೊಯ್ದು ಗುರುಮಠಕಲ್ ಹತ್ತಿರದ ಧರ್ಮಾಪುರ ಘಾಟ್‍ನಲ್ಲಿ ಗುಡ್ಡದ ಇಳಿಜಾರಿಗೆ ತಳ್ಳಿದ್ದರು. ಫೆ.24ರಂದು ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿರುವ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,

ಅನೈತಿಕ ಸಂಬಂಧ ವಿಷಯವಾಗಿ ಕೊಲೆಯಾಗಿರುವ ಜಗನ್ನಾಥ ಪತ್ನಿ ಜೊತೆ ಆಗ್ಗಾಗೆ ಜಗಳವಾಡುತ್ತಿದ್ದರು. ಇದರಿಂದ ರೋಸಿ ಹೋದ ಆರೋಪಿಗಳು ಫೆಬ್ರವರಿ ರಾತ್ರಿ 11 ಗಂಟೆಗೆ ಚಿರಂಜೀವಿ ನಗರದ ಮನೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕಾರಿನಲ್ಲಿ ಸಾಗಿಸಿ ಬಂದಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಎಸ್ಪಿ ಋಷಿಕೇಶ ಭಗವಾನ್ ಸೋನವಣೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣವನ್ನು ತನಿಖೆ ನಡೆಸಿದ ಪಿಎಸ್‍ಐ ಎನ್.ವೈ.ಗುಂಡೂರಾವ್, ಗುರುಮಠಕಲ್ ಪಿಎಸ್‍ಐ ಶೀಲಾದೇವಿ, ಸಿಬ್ಬಂದಿಗಳಾದ ಬಸವರಾಜ, ಗಣೇಶ, ಬಾಪುಗೌಡ, ಸೈದದ ಅಲಿ, ಗೊವಿಂದ, ದಾವಲಸಾಬ, ಮಹ್ಮದ ಶರೀಫ್, ರೇಣುಕಾರಾಜ, ನಾಗೇಂದ್ರಮ್ಮ, ರುಕ್ಮಿಬಾಯಿ, ತಿಮ್ಮಾರಾಜ ಪ್ರಕರಣನ್ನು ಬೇಧಿಸಿದ್ದು ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ₹10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.