ಕಂದಕೂರು(ಗುರುಮಠಕಲ್): ನಾಗರ ಪಂಚಮಿಯ ಹಿನ್ನೆಲೆ ಮಂಗಳವಾರ(ಜುಲೈ 29) ತಾಲ್ಲೂಕಿನ ಕಂದಕೂರು ಗ್ರಾಮದ ಗ್ರಾಮದೇವತೆ ಕೊಂಡ್ಯೆಮ್ಮಾಯಿ(ಕೊಂಡಮ್ಮೇಶ್ವರಿ) ದೇವಿ ಜಾತ್ರೆ ಸಂಪನ್ನವಾಯಿತು.
ಕಂದಕೂರು ಗ್ರಾಮದ ಬೆಟ್ಟದ ಮೇಲಿನ ಕೊಂಡ್ಯೆಮ್ಮಾಯಿ ದೇವಸ್ಥಾನದ ಸುತ್ತಲಿನ ಪರಿಸರದಲ್ಲಿ ‘ಪ್ರತಿ ವರ್ಷ ನಾಗರ ಪಂಚಮಿ ದಿನ ಚೇಳುಗಳು ಕುಟುಕುವುದಿಲ್ಲ’ ಎನ್ನುವ ನಂಬಿಕೆಯಿದೆ. ಅದರಂತೆ ಮಂಗಳವಾರ ಜಾತ್ರೆಯ ವೇಳೆ ಮಕ್ಕಳಿಂದ ವೃದ್ಧರವರೆಗೆ ದರ್ಶನಕ್ಕೆ ಬಂದಿದ್ದ ಭಕ್ತರು ಚೇಳುಗಳನ್ನು ಹಿಡಿದು, ಆಟವಾಡಿ ನಾಗರ ಪಂಚಮಿ ಆಚರಿಸಿದರು.
ವಿಶೇಷ ಸೇವೆಗಳು: ಜಾತ್ರೆಯ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ಗ್ರಾಮದ ಆಂಜನೇಯ ದೇವಸ್ಥಾನದಿಂದ ಕೊಂಡ್ಯೆಮ್ಮಾಯಿ ದೇವಸ್ಥಾನದವರೆಗೆ ಗಂಗಾ(ನೀರಿನ ಕಳಸ), ದೇವರ ಹೋರಿಯ ಮೆರವಣಿಗೆ. ಪೂರ್ಣ ಕಳಸದಲ್ಲಿ ತಂದಿದ್ದ ‘ಜಲ ಬಿಂದಿಗೆ’ಯಿಂದ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ನಂತರ ವಿಶೇಷ ಅಲಂಕಾರ ಸೇವೆ, ಪೂಜಾ ಕಾರ್ಯಗಳು, ಮಂಗಳಾರತಿ, ನೈವೇದ್ಯ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ಜರುಗಿದವು.
ಬೆಳಿಗ್ಗೆ ಗ್ರಾಮದ ಮನೆಗಳಲ್ಲಿ ಸಡಗರ, ಸಂಭ್ರಮ ಮನೆಮಾಡಿದ್ದರೆ, 10 ಗಂಟೆಯ ನಂತರ ಸುತ್ತಲಿನ ಗ್ರಾಮಗಳ ಭಕ್ತರು, ಮಧ್ಯಾಹ್ನದ ವೇಳೆಗೆ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಂದ ಭಕ್ತರು ದರ್ಶನ ಪಡೆದರು.
ಚೇಳಿಗಾಗಿ ಹುಡುಕಾಟ: ಭಕ್ತರು ಜಾತ್ರೆಯಲ್ಲಿ ಚೇಳುಗಳನ್ನು ಹಿಡಿಯಲು ಬೆಟ್ಟದಲ್ಲಿನ ಕಲ್ಲುಗಳನ್ನು, ಪರ್ಸಿಗಳನ್ನು ಸರಿಸಿ ಚೇಳುಗಳನ್ನು ಹುಡುಕಿದರು.
ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಚೇಳನ್ನು ಹಿಡಿಯುವ ವಿಶಿಷ್ಟ ಆಚರಣೆ ಕುರಿತು ಆಕರ್ಷಣೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೂರದ ನಗರಗಳಿಂದ ಬರುವ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಮಂಗಳವಾರ 2 ಕಿ.ಮೀ.ವರೆಗೆ ಭಕ್ತರು ನಡೆದುಕೊಂಡು ಬಂದರು.
ಪೊಲೀಸ್ ಸಿಬ್ಬಂದಿ ನಿಯೋಜನೆ: ಜಾತ್ರೆಯಲ್ಲಿ ಜನದಟ್ಟೆಣೆ ಹೆಚ್ಚಳದಿಂದ ವಾಹನ ದಟ್ಟಣೆಯೂ ಉಂಟಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸಿಬ್ಬಂದಿ ನಿಯೋಜನೆ ಮತ್ತು ಬ್ಯಾರಿಕೇಡ್ ಅಳವಡಿಕೆ ಮಾಡಿದ್ದರಿಂದ ಸಂಭವನಿಯ ವಾಹನದಟ್ಟಣೆ ನಿಯಂತ್ರಣಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.