ಯಾದಗಿರಿ:‘ಜಿಲ್ಲಾ ಕೇಂದ್ರ ಹಾಗೂ ಸುರಪುರ, ಶಹಾಪುರಗಳಲ್ಲಿ ಹೆಸರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಹೆಸರು ಬೆಳೆಗಾರರು ಸೆ.9ರೊಳಗಾಗಿ ಹೆಸರು ನೋದಾಯಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಹೆಸರು ಮಾರಾಟ ಆಗುತ್ತಿರುವುದರಿಂದ ಖರೀದಿ ಕೇಂದ್ರಗಳ ಮೂಲಕ ಕೇಂದ್ರ ಸರ್ಕಾರ ಹೆಸರು ಖರೀದಿಸಲು ಮುಂದಾಗಿದೆ. ಅದಕ್ಕಾಗಿ ನಾಫೆಡ್ ಏಜೆನ್ಸಿಯನ್ನು ನೇಮಿಸಿದೆ’ ಎಂದರು.
‘ರಾಜ್ಯದಲ್ಲಿ ಈಗಾಗಲೇ ಬೆಂಬಲ ಬೆಲೆಗಿಂತ ಕಡಿಮೆ ಧಾರಣೆಯಲ್ಲಿ18,403 ಕ್ವಿಂಟಲ್ನಷ್ಟು ಹೆಸರು ಮಾರಾಟ ಆಗಿದೆ. ಮುಂದಿನ ಅಕ್ಟೋಬರ್ ತಿಂಗಳವರೆಗೆ ಒಟ್ಟು 10ರಿಂದ 13 ಲಕ್ಷ ಕ್ವಿಂಟಲ್ ಹೆಸರು ಆವಕ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 23,250 ಮೆಟ್ರಿಕ್ ಟನ್ ಹೆಸರು ಖರೀದಿಸಲು ಸೂಚನೆ ನೀಡಿದೆ’ ಎಂದು ಹೇಳಿದರು.
‘ಎಫ್ ಕ್ಯೂ ಗುಣಮಟ್ಟದ ಹೆಸರಿಗೆ ಪ್ರತಿ ಕ್ವಿಂಟಲ್ ಗೆ 6,975ರಂತೆ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಪ್ರತಿ ಎಕರೆ 4 ಕ್ವಿಂಟಲ್ನಂತೆ ಒಬ್ಬ ರೈತರ 10 ಕ್ವಿಂಟಲ್ ಖರೀದಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ’ ಎಂದರು.
ಖರೀದಿ ನಂತರ ಬಾಕಿ ನೀಡುವುದಿಲ್ಲ ಎಂಬುದಾಗಿ ರೈತರು ದೂರುತ್ತಾರೆ. ಈ ಕಾರಣಕ್ಕಾಗಿಯೇ ರೈತರಿಗೆ ಸಂಕಷ್ಟ ನೀಡಬಾರದು ಎಂಬ ಉದ್ದೇಶದಿಂದ ಆವರ್ತನಿಧಿಯಿಂದ ₹20 ಕೋಟಿ ಮುಂಗಡ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ಮಾರ್ಕ್ಫೆಡ್ ಸಂಸ್ಥೆಗೆ ತತಕ್ಷಣ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬಿಡುಗಡೆ ಮಾಡುವಂತೆ ಕೇಂದ್ರ ಸೂಚಿಸಿದೆ. ಹಾಗಾಗಿ, ಖರೀದಿ ನಂತರ ರೈತರಿಗೆ ತಕ್ಷಣ ಹಣ ದೊರೆಯಲಿದೆ. ಹಾಗಾಗಿ, ರೈತರು ಖರೀದಿ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರೈತರಿಗೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಉಪ ವಿಭಾಗಾಧಿಕಾರಿ ಬಿ.ಎಸ್.ಮಂಜುನಾಥ್ಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.