ADVERTISEMENT

ಯಾವ ಜಾತಿಗೂ ಮೀಸಲಾತಿ ಬೇಡ: ಶಾಸಕ ರಾಜೂಗೌಡ

ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂಪ್ಪ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ:

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 6:16 IST
Last Updated 21 ಫೆಬ್ರುವರಿ 2021, 6:16 IST
ರಾಜೂಗೌಡ
ರಾಜೂಗೌಡ   

ಯಾದಗಿರಿ: ‘ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂಪ್ಪ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಯಾವ ಜಾತಿಗೂ ಮೀಸಲಾತಿ ಕೊಡುವುದು ಬೇಡವೇ ಬೇಡ’ ಎಂದು ಶಾಸಕ ರಾಜೂಗೌಡ ಹೇಳಿದರು.

ಸುರಪುರ ತಾಲ್ಲೂಕಿನ ಖಾನಾಪುರ ಎಸ್‌.ಎಚ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಒಂದು ಅಕ್ಷರ ಬದಲಾವಣೆ ಮಾಡುವ ಶಕ್ತಿ ಯಾರಿಗೂ ಇಲ್ಲ. ಲಿಂಗಾಯತ, ಒಕ್ಕಲಿಗ, ಪಂಚಮಸಾಲಿ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಎಲ್ಲಿ ಕಡುಬಡವರಿದ್ದಾರೆಯೋ ಅದರ ಆಧಾರದ ಮೇಲೆ ಮೀಸಲಾತಿ ನೀಡಬೇಕು’ ಎಂದು ಅವರು ಹೇಳಿದರು.

‘ಮಳೆ ಬಂದರೆ ಸಂತೆಯಲ್ಲಿ ಉಪ್ಪು ಮಾರುವವರು ಅಳುತ್ತಾರೆ. ಉಪ್ಪು ಕರಗಿ ಹೋಗುತ್ತದೆ ಎಂಬ ಆತಂಕ ಅವರಿಗೆ.ಆದರೆ, ಈಗ ತೆಂಗಿನಕಾಯಿ ಮಾರುವವರೂ ಅಳುತ್ತಿದ್ದಾರೆ’ ಎಂದು ಸೂಚ್ಯವಾಗಿ ಹೇಳಿದರು.

ADVERTISEMENT

‘ಕನ್ನಡ ಶಾಲೆಯಲ್ಲಿ ಓದಿದವರಿಗೆ ಮೀಸಲಾತಿ ಕೊಡಲಿ’

ಸುರಪುರ: ‘ಮೀಸಲಾತಿ ಬಗ್ಗೆ ನನ್ನ ವಿರೋಧವಿಲ್ಲ, ಆರ್ಥಿಕವಾಗಿ ಹಿಂದುಳಿದವರಿಗೆ ಈ ಸೌಲಭ್ಯ ಸಿಗಬೇಕು ನಿಜ. ಎಲ್ಲಾ ಜಾತಿ ಜನಾಂಗದಿಂದ ಮೀಸಲಾತಿ ಕೂಗು ಜೋರಾಗುತ್ತಿದೆ. ಹೀಗಾಗಿ ಮೀಸಲಾತಿ ಯಾರಿಗೆ ಕೊಡಬೇಕು ಎಂಬ ಸಂದಿಗ್ಧತೆಯಲ್ಲಿ ಸರ್ಕಾರ ಇದೆ. ಕನ್ನಡ ಶಾಲೆಯಲ್ಲಿ ಓದಿದವರಿಗೆ ಮೀಸಲಾತಿ ಕೊಡಲಿ’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ರಾಜೂಗೌಡ ಹೇಳಿದರು.

ತಾಲ್ಲೂಕಿನ ಖಾನಾಪುರ ಎಸ್.ಎಚ್. ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಹೇಗೆ ದೇಶದ ಆಸ್ತಿಯೋ ಅದೇ ರೀತಿ ಸಿದ್ದರಾಮಯ್ಯ, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ ಇವರೆಲ್ಲ ಪಕ್ಷದ ಆಸ್ತಿ ಅಲ್ಲ. ಈ ರಾಜ್ಯದ ಆಸ್ತಿ. ಅವರ ಕುರಿತು ಹೇಳಿಕೆ ನೀಡುವಾಗ ಯಾರೇ ಆಗಿರಲಿ ಎಚ್ಚರಿಕೆ ವಹಿಸಬೇಕು’ ಎಂದರು.

‘ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ಅವರು ದೇವರನ್ನು ಎಷ್ಟು ವಿರೋಧಿಸುತ್ತಾರೋ ಅವರಲ್ಲಿ ಅಷ್ಟೇ ಪೂಜ್ಯನೀಯ ಭಾವ ಇದೆ. ರಾಮಮಂದಿರಕ್ಕೆ ಅವರು ಖಂಡಿತವಾಗಿ ದೇಣಿಗೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಸಿದ್ದರಾಮಯ್ಯನವರ ಬಗ್ಗೆ ನನಗೆ ಗೌರವವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.