ADVERTISEMENT

ಘೋಷಣೆಯಲ್ಲೇ ಉಳಿದ ₹1 ಲಕ್ಷ ಪರಿಹಾರ

ಬಿಪಿಎಲ್ ಕುಟುಂಬಗಳಿಗೆ ಸಿಗದ ಪರಿಹಾರದ ಹಣ, ಮತ್ತಷ್ಟು ಸಂಕಷ್ಟಕ್ಕೊಳಗಾದ ಜನತೆ

ಬಿ.ಜಿ.ಪ್ರವೀಣಕುಮಾರ
Published 9 ಸೆಪ್ಟೆಂಬರ್ 2021, 4:11 IST
Last Updated 9 ಸೆಪ್ಟೆಂಬರ್ 2021, 4:11 IST
ಯಾದಗಿರಿ ನಗರ ಹೊರವಲಯದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಸ್ಪತ್ರೆ
ಯಾದಗಿರಿ ನಗರ ಹೊರವಲಯದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಸ್ಪತ್ರೆ   

ಯಾದಗಿರಿ: ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌ನಿಂದ ಮೃತಪಟ್ಟ ದುಡಿಯುವ ಸದಸ್ಯರನ್ನು ಕಳೆದು ಕೊಂಡ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡಲಾಗುವುದು ಎನ್ನು ವುದುಘೋಷಣೆಯಲ್ಲೇ ಉಳಿದಿದೆ.

2021ರ ಜೂನ್‌ 14ರಂದು ಘೋಷಣೆ ಮಾಡಲಾಗಿತ್ತು. ಜುಲೈ 8ರಂದು ಘೋಷಣೆಯ ಆದೇಶವನ್ನು ಅಧಿಕೃತವಾಗಿ ಪ್ರಕಟಿಲಾಗಿತ್ತು. ಆದರೆ, ಇಲ್ಲಿಯವರೆಗೆ ಇದನ್ನು ಅನುಷ್ಠಾನಕ್ಕೆ ಬಾರದ ಕಾರಣ ಪರಿಹಾರವೇ ಸಿಕ್ಕಿಲ್ಲ.

ಜಿಲ್ಲೆಯಲ್ಲಿ ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಸರ್ಕಾರಿ ದಾಖಲೆ ಪ್ರಕಾರ 207 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಎಷ್ಟು ಜನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳೆಷ್ಟು ಎನ್ನುವ ಮಾಹಿತಿ ಇಲ್ಲ. ಈಚೆಗೆ ಕೆಲ ತಾಲ್ಲೂಕುಗಳಲ್ಲಿ ಅರ್ಜಿ ಸ್ವೀಕರಿಸಲು ಹಿಂದೇಟು ಹಾಕಲಾಗಿತ್ತು. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಬೂಬು ಹೇಳಲಾಗುತ್ತಿತ್ತು.

ADVERTISEMENT

ಅನುಷ್ಠಾನವಾಗದ ಪರಿಹಾರ: ಪರಿಹಾರ ಘೋಷಣೆ ಮಾಡಿ ಎರಡು ತಿಂಗಳು ಕಳೆದರೂ ಈ ಬಗ್ಗೆ ಸರ್ಕಾರ ಯಾವುದೇ ರೀತಿಯಿಂದ ಅನುಷ್ಠಾನ ಮಾಡದ ಕಾರಣ ಪರಿಹಾರದ ಹಣ ಫಲಾನುಭವಿಗಳಿಗೆ ದಕ್ಕಿಲ್ಲ.

ಒಂದು ಮತ್ತು ಎರಡನೇ ಅಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಇವರ ನೆರವಿಗೆ ಧಾವಿಸುವ ಯೋಜನೆ ಇದಾಗಿದೆ. ಆದರೆ, ಇದು ಇನ್ನೂ ಅನುಷ್ಠಾನವಾಗದ ಕಾರಣ ಪ್ರಯೋಜನವಾಗುತ್ತಿಲ್ಲ.

ಕೋವಿಡ್‌ನಿಂದ ಮೃತಪಟ್ಟವರ ಬಗ್ಗೆ ಮಾತ್ರ ನಮ್ಮಲ್ಲಿ ಮಾಹಿತಿ ಇದೆ. ಆದರೆ, ಬಿಪಿಎಲ್‌ ಕುಟುಂಬದವರ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಬೇಕು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿದರೆ, ಕಂದಾಯ ಇಲಾಖೆಯಲ್ಲಿ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

ಮೊದಲ ಅಲೆಯಲ್ಲಿ 61 ಸಾವು: ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೊದಲ ಅಲೆಯಲ್ಲಿ 61, ಎರಡನೇ ಅಲೆಯಲ್ಲಿ 146 ಜನರು ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 46 ಪುರುಷರು, 15 ಮಹಿಳೆಯರು ಸಾವನ್ನಪ್ಪಿದ್ದರೆ, ಎರಡನೇ ಅಲೆಯಲ್ಲಿ 93 ಪುರುಷರು, 53 ಮಹಿಳೆಯರು ಕೋವಿಡ್‌ನಿಂದ ಮೃತರಾಗಿದ್ದಾರೆ.

ಮೊದಲ ಅಲೆಯಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 17, ಶಹಾ‍ಪುರ ತಾಲ್ಲೂಕಿನಲ್ಲಿ 31, ಸುರಪುರ ತಾಲ್ಲೂಕಿನಲ್ಲಿ 13 ಸೇರಿದಂತೆ ಒಟ್ಟಾರೆ 61 ಜನ ಸಾವನಪ್ಪಿದ್ದಾರೆ.

ಎರಡನೇ ಅಲೆಯಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 67, ಶಹಾಪುರ ತಾಲ್ಲೂಕಿನಲ್ಲಿ 48, ಸುರಪುರ ತಾಲ್ಲೂಕಿನಲ್ಲಿ31 ಸೇರಿದಂತೆ 146ಜನ ಮೃತಪಟ್ಟಿದ್ದಾರೆ.

ಕೋವಿಡ್‌ ಕಾರಣದಿಂದ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ 106 ಜನ ಮೃತಪಟ್ಟಿದ್ದಾರೆ. ಯಾದಗಿರಿ ಸರ್ಕಾರಿ ಕೋವಿಡ್‌ ಜಿಲ್ಲಾ ಆಸ್ಪತ್ರೆಯಲ್ಲಿ 96, ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ 10, ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ 2 ಸೇರಿದಂತೆ 106 ಜನ ಸಾವನ್ನಪ್ಪಿದ್ದಾರೆ.

ಮೊದಲ ಅಲೆಯಲ್ಲಿ 31 ರಿಂದ 40 ವಯಸ್ಸಿನವರು 5, 41ರಿಂದ 50 ವಯಸ್ಸಿನವರು 6, 51 ರಿಂದ 60 ವಯಸ್ಸಿನವರು 16, 61ರಿಂದ 70 ವಯಸ್ಸಿನವರು 26, 71ರಿಂದ 80 ವಯಸ್ಸಿನವರು 9, 80 ವರ್ಷ ಮೇಲ್ಟಟ್ಟವರು ಮೂವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಇನ್ನೂ ಎರಡನೇ ಅಲೆಯಲ್ಲಿ 21 ರಿಂದ 30 ವಯಸ್ಸಿನವರು 5, 31ರಿಂದ 40 ವಯಸ್ಸಿನವರು 15, 41 ರಿಂದ 50 ವಯಸ್ಸಿನವರು 31, 51ರಿಂದ 60 ವಯಸ್ಸಿನವರು 38, 61ರಿಂದ 70 ವಯಸ್ಸಿನವರು 37, 70 ರಿಂದ 80 ವಯಸ್ಸಿನವರು 14, 80ವರ್ಷ ಮೇಲ್ಟಟ್ಟವರು ಆರು ಜನ ಕೋವಿಡ್‌ನಿಂದ ಸಾವನ್ನಪಿದ್ದಾರೆ.

ಇವರು ಏನಂತಾರೆ?

*ತಾಲ್ಲೂಕು ಕೇಂದ್ರಗಳಲ್ಲಿ ಪರಿಹಾರದ ಅರ್ಜಿ ಸ್ವೀಕರಿಸಲು ತಿಳಿಸಿದ್ದೇನೆ. ಪರಿಹಾರ ಹಣದ ಬಗ್ಗೆ ಸರ್ಕಾರದಿಂದ ಯಾವುದೇ ಲಾಗಿನ್‌
ಐಡಿ ನೀಡಿಲ್ಲ

ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

*ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಿಲ್ಲ

ಬಸವರಾಜಪ್ಪ ಹೊಸಮನಿ, ಫಲಾನುಭವಿ ಪುತ್ರ

*ಬಡವರಿಗೆ ಕೇವಲ ಕಣ್ಣೋರಿಸುವ ಸರ್ಕಾರದ ಘೋಷಣೆಯಾಗಿದೆ. ಶೀಘ್ರ ಬಿ‍ಪಿಎಲ್‌ ಕುಟುಂಬಗಳಲ್ಲಿ ಮೃತಪಟ್ಟವರಿಗೆ ₹1 ಲಕ್ಷ ಜಮಾ ಮಾಡಬೇಕು

ಅವಿನಾಶ ಜಗನ್ನಾಥ, ಯೂತ್‌ ಕಾಂಗ್ರೆಸ್‌ ಉಪಾಧ್ಯಕ್ಷ

*ಕೋವಿಡ್‌ನಿಂದ ಬಿಪಿಎಲ್‌ ಕುಟುಂಬದವರು ಮೃತಪಟ್ಟಿದ್ದಲ್ಲಿ ಪರಿಹಾರ ನೀಡಲು ಅರ್ಜಿ ಸ್ವೀಕರಿಸಲಾಗುತ್ತಿದೆ. ಸೂಕ್ತ ದಾಖಲೆ ನೀಡಿ ಅರ್ಜಿ ಸಲ್ಲಿಸಬೇಕು

ಮಧುರಾಜ, ತಹಶೀಲ್ದಾರ್‌, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.