ಸುರಪುರ: ಶಾಸಕ ರಾಜೂಗೌಡ ಸೇವಾ ಸಮಿತಿಯಿಂದ ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರಿಗೆ ಈಚೆಗೆ ಊಟ, ಉಪಹಾರದ ಜೊತೆ ಪೌಷ್ಠಿಕ ಆಹಾರ ವಿತರಿಸಲಾಯಿತು.
ಸಾರ್ವಜನಿಕ ಆಸ್ಪತ್ರೆಯ 50 ಮತ್ತು ಖಾಸಗಿ ಆಸ್ಪತ್ರೆಯಲಿ ದಾಖಲಾಗಿರುವ 30 ಜನರು ಸೇರಿ 80ಕ್ಕೂ ಹೆಚ್ಚು ಸೋಂಕಿತರಿಗೆ ಪೌಷ್ಠಿಕ ಆಹಾರದ ಪೊಟ್ಟಣ ನೀಡಿದರು. ಪ್ರತಿ ಪೊಟ್ಟಣದಲ್ಲಿ ತಲಾ 100 ಗ್ರಾಂ ಬದಾಮಿ, ಒಣದ್ರಾಕ್ಷಿ, ಗೋಡಂಬಿ, ಆಕ್ರೋಟ್ ಇದ್ದವು. ಇನ್ನೊಂದು ಪೊಟ್ಟಣದಲ್ಲಿ ಹೆಸರು, ಉರುಳಿ, ಕಡಲೆ, ಮೊಳಕೆ ಕಾಳು ಮತ್ತು ಸೇಬು, ಅಂಜೂರ, ಆರೆಂಜ್, ಪಪ್ಪಾಯಿ, ಚಿಕ್ಕು, ಕರಬೂಜ, ಕಲ್ಲಂಗಡಿ, ಬಾಳೆ ಸೇರಿದಂತೆ ಇತರೆ ಹಣ್ಣುಗಳ ಪೊಟ್ಟಣ ವಿತರಿಸಿದರು. ಮಧುಮೇಹ ರೋಗಿಗಳಿಗೆ ಸುಗರ್ಲೆಸ್ ಬಿಸ್ಕಿಟ್ ಪ್ಯಾಕೇಟ್ ನೀಡಿದರು.
ರೋಗದ ವಿರುದ್ದ ಹೋರಾಡೋಣ ಕೊರೊನಾ ಗೆಲ್ಲೋಣ ಎಂಬ ಘೋಷ ವಾಕ್ಯದ ಬರಹದ ಬಿತ್ತಿ ಪತ್ರಗಳನ್ನು ಸಮಿತಿಯ ಕಾರ್ಯಕರ್ತರು ತಮ್ಮ ಬೈಕ್ಗಳಿಗೆ ಅಂಟಿಸಿಕೊಂಡು ಸುರಕ್ಷತೆಯೊಂದಿಗೆ ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ಪೌಷ್ಠಿಕ ಆಹಾರದ ಪೊಟ್ಟಣ ವಿತರಿಸಿದರು. ಕೊರೊನಾ ಯೋಧರ ಕರ್ತವ್ಯ ನಿಯೋಜಿತ ಸ್ಥಳಕ್ಕೆ ಹೋಗಿ ಮಧ್ಯಾಹ್ನದ ಊಟದ ಪೊಟ್ಟಣ ನೀರಿನ ಪ್ಯಾಕೆಟ್ ತಲುಪಿಸಿದರು.
ಸಮಿತಿಯ ಸಂಚಾಲಕ ಲಕ್ಷ್ಮೀಕಾಂತ ದೇವರಗೋನಾಲ ಮಾತನಾಡಿ, ‘ಶಾಸಕರ ತಾಯಿ ತಿಮ್ಮಮ್ಮಗೌಡತಿ ಸ್ಮರಣಾರ್ಥವಾಗಿ ಈ ಸೇವೆ ಕೈಗೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮಾತ್ರ ಡ್ರೈಫ್ರೂಟ್ಸ್ನೊಂದಿಗೆ ಹಣ್ಣು, ಮೊಳಕೆ ಕಾಳುಗಳ ಪೌಷ್ಠಿಕ ಆಹಾರ ನೀಡುತ್ತೇವೆ. ಕೊರೊನಾ ವಾರಿಯರ್ಸ್ ಸೇವೆಯಲ್ಲಿರುವ ಪೊಲೀಸ್, ಹೋಂ ಗಾರ್ಡ್, ಆರೋಗ್ಯ ಕಾರ್ಯಕರ್ತರು, ನಿರ್ಗತಿಕರು, ಅಸಹಾಯಕರು ಮತ್ತು ಆರೋಗ್ಯ ತಪಾಸಣೆಗೆ ಬರುವ ಗರ್ಭಿಣಿಯರು ಮಹಿಳೆಯರು, ಮಕ್ಕಳಿಗೆ ಊಟದ ಪೊಟ್ಟಣ, ನೀರು ನೀಡುತ್ತೇವೆ. 24 ಗೆಳೆಯರ ತಂಡದೊಂದಿಗೆ ಈ ಸೇವೆ ನಿರಂತರವಾಗಿ ಮುಂದುವರೆಯಲಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.