ಯಾದಗಿರಿ: ನಗರ ಹೊರವಲಯದ ಶತಮಾನದ ಭೀಮಾನದಿ ಸೇತುವೆಗೆ ಹಬ್ಬಿದ್ದ ಗಿಡಗಂಟಿಗಳನ್ನು ಲೋಕೋಪಯೋಗಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಲ್ಲದೆ ಸೇತುವೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಹುಲ್ಲನ್ನೂ ಕತ್ತರಿಸಿದ್ದಾರೆ.
ಈ ಕುರಿತು ಜೂನ್ 18ರಂದು ‘ಭೀಮಾ; ಸೇತುವೆಗೆ ಹಬ್ಬಿದ ಗಿಡಗಂಟಿ’ ಎನ್ನುವ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈಚೆಗೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸೇತುವೆಗೆ ಭೇಟಿ ನೀಡಿ ಗಿಡಗಂಟಿ ತೆರವು ಮಾಡಲು ಅಧಿಕಾರಿಗಳಿಗೆ
ಸೂಚಿಸಿದ್ದರು.
ಈಗ ಮಳೆಗಾಲವಾಗಿದ್ದರಿಂದ ಸೇತುವೆ ಬಳಿ ಗಿಡಗಂಟಿಗಳು ಬೆಳೆದು ಸೇತುವೆಗೆ ಧಕ್ಕೆ ತರುತ್ತಿದ್ದವು. ಆಲದ ಮರದ ಬೇರುಗಳು ಅಲ್ಲಲ್ಲಿ ಹರಡಿ ಬಿರುಕಿಗೆ ಕಾರಣವಾಗಿದ್ದವು. ಇದು ಸೇತುವೆಗೆ ಧಕ್ಕೆ ತರುವಂತೆ ಇತ್ತು. ಈ ಕುರಿತು ‘ಪ್ರಜಾವಾಣಿ’ ವಿಸ್ತೃತ ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ಣು ತೆರೆಸಿತ್ತು.
‘ಎರಡು ಬದಿಯಲ್ಲಿ ಗಿಡಗಳನ್ನು ಕಡಿದು ತೆರವು ಗೊಳಿಸಲಾಗಿದೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕಾಗಿತ್ತು. ಈಗ ಸೇತುವೆ ಮೇಲೆ ಬಂದ ಗಿಡಗಂಟೆ ಮಾತ್ರ ತೆರವುಗೊಳಿಸಲಾಗಿದೆ. ಆದರೆ, ಬುಡ ಹಾಗೇ ಇದೆ. ಇದು ಮತ್ತೊಮ್ಮೆ ಬೆಳೆಯಲಿದೆ. ಹೀಗಾಗಿ ಇದನ್ನು ಬುಡಸಮೇತ ಕಿತ್ತು ಹಾಕಿ ಶಾಶ್ವತ ಪರಿಹಾರ ಮಾಡಬೇಕು. ಆಗ ಮಾತ್ರ ಸೇತುವೆಗೆ ಸಮಸ್ಯೆ ಆಗುವುದಿಲ್ಲ’ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.