ಯಾದಗಿರಿ: ಜಿಲ್ಲೆಯ ಸಾರ್ವಜನಿಕರು, ವ್ಯಾಪಾರಸ್ಥರು, ಆದಾಯ ತೆರಿಗೆ ಪಾವತಿದಾರರು ನಿಗದಿತ ಕಾಲಮಿತಿಯೊಳಗೆ ಆದಾಯ ತೆರಿಗೆಯನ್ನು ಪಾವತಿಸಬೇಕು. ಇದರಿಂದ ದಂಡ ಪಾವತಿಸುವುದು ತಪ್ಪುತ್ತದೆ ಎಂದು ಕಲಬುರ್ಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಾಗರಾಜ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಚೇಂಬರ್ ಕಚೇರಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಆದಾಯ ತೆರಿಗೆ ಇಲಾಖೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಆದಾಯ ತೆರಿಗೆ ಮತ್ತು ಮುಂಗಡ ಆದಾಯ ತೆರಿಗೆ ಪಾವತಿಸುವ ಬಗೆಗಿನ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಆದಾಯ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. ಪಾವತಿಸದೆ ಇರುವವರಿಗೆ ನೋಟಿಸ್ ನೀಡುವ ಮೂಲಕ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೀಗಾಗಿ ಯಾರೂ ದಂಡ ಕಟ್ಟುವ ಮಟ್ಟಕ್ಕೆ ಹೋಗದೆ, ಅವಧಿ ಪೂರ್ವದಲ್ಲೇ ಆದಾಯ ತೆರಿಗೆ ಪಾವತಿಸಬೇಕು. ಈ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದವರು ಬೇರೆಯವರಿಗೂ ಆದಾಯ ತೆರಿಗೆ ಪಾವತಿಸುವ ಕುರಿತು ತಿಳಿಸಬೇಕು ಎಂದರು.
ಯಾದಗಿರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ದೇಬಸುಂದರ ಗೋರೆ ಮಾತನಾಡಿ, ಪ್ರಸ್ತುತ ಬಜೆಟ್ನಲ್ಲಿ ‘ವಿವಾದ್ ಸೇ ವಿಶ್ವಾಸ’ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಕಲಂ 139ರ ಪ್ರಕಾರ ನಿಗದಿತ ಅವಧಿಯಲ್ಲಿ ಇನ್ಕಮ್ ಟ್ಯಾಕ್ಸ್ ರಿಟನ್ ಫೈಲ್ ಮಾಡಬೇಕು. ಕಲಂ 208 ರ ಪ್ರಕಾರ ಮುಂಗಡ ಆದಾಯ ತೆರಿಗೆ ಪಾವತಿಸಬೇಕು.
ತೆರಿಗೆ ಪಾವತಿದಾರರು ಆಗಾಗ ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಶಶಿಧರ ಪಾಟೀಲ ಮಾತನಾಡಿ, ಆದಾಯ ತೆರಿಗೆ ಪಾವತಿದಾರರು ಮಾಚ್ 31ರವರೆಗೆ ಆದಾಯ ತೆರಿಗೆ ಪಾವತಿಸಲು ಕಾಲಾವಕಾಶವಿದ್ದು, ಸಮಯದ ಸದುಪಯೋಗ ಪಡೆದು ಸ್ವಯಂ ಪ್ರೇರಿತರಾಗಿ ಆದಾಯ ತೆರಿಗೆ ಪಾವತಿಸಬೇಕು. ಮುಂದಿನ ವರ್ಷದಿಂದ ಆದಾಯ ತೆರಿಗೆ ಪಾವತಿಸುವ ಕುರಿತು ಹೊಸ ಯೋಜನೆಗಳು ಜಾರಿಯಾಗುತ್ತಿದ್ದು, ಅವುಗಳ ಕುರಿತು ತಿಳಿದುಕೊಳ್ಳಬೇಕು ಎಂದರು.
ಸಭೆಯಲ್ಲಿ ವ್ಯಾಪಾರಸ್ಥರು, ಲೆಕ್ಕಪರಿಶೋಧಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಅಕ್ಕಿ ನಿರೂಪಿಸಿದರು. ಹನುಮಾನದಾಸ ಮುದಂಡಾ ಸ್ವಾಗತಿಸಿದರು. ತೆರಿಗೆ ಕಮಿಟಿ ಅಧ್ಯಕ್ಷ ಗಾಂಧಿ ರಾಜೇಂದ್ರ ಜೈನ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.