ನಾರಾಯಣಪುರ: ಇಲ್ಲಿನ ರಾಘವೇಂದ್ರಸ್ವಾಮಿ ಮಠಕ್ಕೆ ಭಾನುವಾರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಭೇಟಿ ನೀಡಿ, ಮಠದ ಯತಿದ್ವಯರ ಬೃಂದಾವನಗಳು ಹಾಗೂ ಸೀತಾದೇವಿ ಸಹಿತ ಶ್ರೀರಾಮದೇವರು, ಲಕ್ಷ್ಮಣ, ಹನುಮದೇವರ ಮೂರ್ತಿಗಳಿಗೆ ಪೂಜೆ ನೆರವೇರಿಸಿ, ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.
ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಚನ ನೀಡಿ, ‘ಅಯೋಧ್ಯಾ ಕ್ಷೇತ್ರವು ಮೋಕ್ಷದಾಯಕವಾಗಿದೆ. ಶ್ರೀರಾಮ ದೇವರ ಭವ್ಯಮಂದಿರ ನಿರ್ಮಾಣವಾಗಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ದೇಗುಲ ಲೋಕಾರ್ಪಣೆಗೊಂಡಿರುವುದು ಅತ್ಯಂತ ಹರ್ಷದ ವಿಷಯವಾಗಿದೆ. ಅಂತಹ ಶ್ರೀರಾಮ ದೇವರನ್ನು ಧೃಡವಾದ ಭಕ್ತಿಯಿಂದ ಪೂಜಿಸುವ ಭಕ್ತ ಗಣಕ್ಕೆ ಅನುಗ್ರಹ ಆಶೀರ್ವಾದ ಸದಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ತಾವು ಬಯಸಿದ ಭಾಗ್ಯ ಪಡೆಯಲು ಪ್ರಯತ್ನದೊಂದಿಗೆ ದೇವರ ಅನುಗ್ರಹವು ಬೇಕು. ಸನಾತನ ಧರ್ಮದ ಹಿರಿಮೆ ಅದು ಎಂದೆಂದೆಗೂ ವಿನಾಶಕ್ಕೀಡಾಗದ ಮತ್ತೆ ತೆಲೆಯೆತ್ತಿ ನಿಲ್ಲುವ ಸಂಸ್ಕೃತಿಯಾಗಿದೆ. ಮಕ್ಕಳಿಗೆ ಹಿರಿಯರಿಂದ ಬಂದಿರುವ ಭಕ್ತಿ, ಪ್ರೀತಿ, ಅಭಿಮಾನ, ಭಜನೆ, ಹರಿಕತೆ, ಭರತನಾಟ್ಯ, ಯಕ್ಷಗಾನ ದಂತಹ ಕಲೆಗಳು ಮಾಧ್ಯಮದ ಮೂಲಕ ಪರಿಚಯವಾಗಿವೆ. ಅಂತಹ ಭವ್ಯವಾದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿ ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದರು.
ಮಠಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು ಸ್ಥಳೀಯ ಗುರುರಾಜ ಭಜನಾ ಮಂಡಳಿಯವರು ಸೇರಿ ಶ್ರೀಮಠದ ಭಕ್ತರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು. ನಂತರ ಭಜನೆಯ, ಜೈ ಘೋಷಗಳೊಂದಿಗೆ ಶ್ರೀಗಳನ್ನು ಮಠಕ್ಕೆ ಕರೆತರಲಾಯಿತು. ನಾರಾಯಣಪುರ, ಕೊಡೇಕಲ್ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.