ADVERTISEMENT

ವೀರಶೈವರು ನಿತ್ಯವೂ ಲಿಂಗ ಪೂಜೆ ಕೈಗೊಳ್ಳಿ

ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವದಲ್ಲಿ ಸುಗೂರೇಶ್ವರ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 16:36 IST
Last Updated 27 ಮಾರ್ಚ್ 2021, 16:36 IST
ಯಾದಗಿರಿಯಲ್ಲಿ ನಡೆದ ರೇಣುಕಾಚಾರ್ಯರ ಜಯಂತಿಯಲ್ಲಿ ಸುಗೂರೇಶ್ವರ ಶಿವಾಚಾರ್ಯರು ಮಾತನಾಡಿದರು
ಯಾದಗಿರಿಯಲ್ಲಿ ನಡೆದ ರೇಣುಕಾಚಾರ್ಯರ ಜಯಂತಿಯಲ್ಲಿ ಸುಗೂರೇಶ್ವರ ಶಿವಾಚಾರ್ಯರು ಮಾತನಾಡಿದರು   

ಯಾದಗಿರಿ: ‘ವೀರಶೈವ ಸಮಾಜದವರು ಇಷ್ಟಲಿಂಗ ಪೂಜೆ ತಪ್ಪದೇ ಮಾಡಬೇಕು. ದೀಕ್ಷೆ ತೆಗೆದುಕೊಳ್ಳದೆ ಇದ್ದವರು ತೆಗೆದುಕೊಳ್ಳಬೇಕು’ ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಸುಗೂರೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಯುವ ಘಟಕದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಣುಕಾ ಚಾರ್ಯರ ಜಯಂತಿಹಾಗೂ ಪಂ. ಜಿ.ಎಂ.ಗುರುಸಿದ್ದ ಶಾಸ್ತ್ರಿಗಳ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು.

‘ದೇಶದಲ್ಲಿ ಕೋವಿಡ್‌ ಬಂದಾಗ ಎಲ್ಲ ವಿಧದ ದೇವಸ್ಥಾನ, ಚರ್ಚ್‌, ಮಸೀದಿ, ಬುದ್ಧವಿಹಾರಗಳಿಗೆ ಬಾಗಿಲು ಹಾಕಲಾಯಿತು. ಎಂದೂ ಮುಚ್ಚದ ತಿರುಪತಿ ದೇವಸ್ಥಾನಕ್ಕೂ ಬೀಗ ಹಾಕಲಾಯಿತು. ಆದರೆ, ಮನೆಯಲ್ಲಿ ಪೂಜೆ, ಪುನಸ್ಕಾರ ಮಾಡಲು ಯಾವುದೇ ಅಡ್ಡಿ ಇರಲಿಲ್ಲ. ಪೊಲೀಸರು ಲಾಠಿ ಬೀಸಲಿಲ್ಲ. ಹೀಗಾಗಿ ವೀರಶೈವರು ಲಿಂಗವನ್ನು ಧರಿಸಿ ಪೂಜೆ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ದಾಸಬಾಳ ಮಠದ ಸದ್ಗುರು ವೀರೇಶ್ವರ ಸ್ವಾಮೀಜಿ ಆರ್ಶೀವಚನದಲ್ಲಿ ‘ನಾನು ಯಾದಗಿರಿಗೆ ಬಂದು 11 ವರ್ಷಗಳಾಯಿತು. ಮೊದಲ ಬಾರಿ ವೀರಶೈವ ಸಮಾಜದಿಂದ ರೇಣುಕಾಚಾರ್ಯರ ಜಯಂತಿ ಆಚರಿಸು ತ್ತಿರುವುದು ಸಂತೋಷದ ಸಂಗತಿ’ ಎಂದರು.

ವೀರಶೈವ ಸಮಾಜ ನಗರ ಘಟಕ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್ ಮಾತನಾಡಿ, ಲಿಂ.ಗುರುಸಿದ್ದ ಶಾಸ್ತ್ರಿಗಳು ವೀರಶೈವ ಕಲ್ಯಾಣ ಮಂಟಪ ಕಟ್ಟಲು ಕಾರಣೀಭೂತರಾಗಿದ್ದಾರೆ. ಅಂದಿನ ಸಮಯದಲ್ಲೇ ವೀರಶೈವ ಸಮಾಜ ಕಟ್ಟಿದ ಧೀಮಂತರಲ್ಲಿ ಒಬ್ಬರು ಎಂದರು.

ಪ್ರಾಸ್ತಾವಿಕ ಮಾತನಾಡಿದ ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ, ಮಹಾಸಭೆ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಯಂತಿ ಹಮ್ಮಿಕೊ ಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪನೆ, ವಸತಿ ನಿಲಯಗಳು ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಡಾ. ವೀರಬಸ ವಂತರೆಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಮಣ್ಣೂರು ಅಧ್ಯಕ್ಷತೆ ವಹಿಸಿದ್ದರು.

ರಾಮಗಿರಿ ಹಿರೇಮಠದ ಬಸವರಾಜ ಶಾಸ್ತ್ರಿ, ಮಾಜಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಬಿಜೆಪಿ ಯುವಮುಖಂಡ ಮಹೇಶರೆಡ್ಡಿ ಮುದ್ನಾಳ, ಶರಣಪ್ಪಗೌಡ ಮಲ್ಹಾರ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಆರ್.ಮಹಾದೇವಪ್ಪ ಅಬ್ಬೆತು ಮಕೂರು, ಜಿಲ್ಲಾ ಯುವ ಅಧ್ಯಕ್ಷ ಅವಿನಾಶ ಜಗನ್ನಾಥ ಇದ್ದರು.

ಪದವಿ ಕಾಲೇಜು ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು. ಮಹೇಶ ಹಿರೇಮಠ ಆಶನಾಳ ಸ್ವಾಗತಿಸಿದರು, ಶರಣು ಆಶನಾಳ ವಂದಿಸಿದರು.

***

ವೀರಶೈವ ಸಮಾಜದ ಆಚಾರ–ವಿಚಾರಗಳು ವೈಜ್ಞಾನಿಕತೆಗೆಹತ್ತಿರವಾಗಿವೆ. ಮೂಢನಂಬಿಕೆ ಬಿಟ್ಟು ಸಮಾಜ ಕಟ್ಟಬೇಕು

ಸುಗೂರೇಶ್ವರ ಶಿವಾಚಾರ್ಯ, ಶಹಾಪುರದ ಕುಂಬಾರಗೇರಿ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.