ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಲುಂಬಿನಿ ವನ ಸ್ವಚ್ಛಗೊಳಿಸಿದ ಅಧಿಕಾರಿಗಳು

ಜೆಸಿಬಿ, ಟ್ರ್ಯಾಕ್ಟರ್‌ ಮೂಲಕ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 2:12 IST
Last Updated 8 ಜುಲೈ 2021, 2:12 IST
ಯಾದಗಿರಿಯ ಲುಂಬಿನಿ ವನದಲ್ಲಿ ಜೆಸಿಬಿ ಮೂಲಕ ಗಿಡಗಂಟಿ ತೆರವುಗೊಳಿಸುತ್ತಿರುವುದು
ಯಾದಗಿರಿಯ ಲುಂಬಿನಿ ವನದಲ್ಲಿ ಜೆಸಿಬಿ ಮೂಲಕ ಗಿಡಗಂಟಿ ತೆರವುಗೊಳಿಸುತ್ತಿರುವುದು   

ಯಾದಗಿರಿ: ನಗರದ ಲುಂಬಿನಿ ವನದಲ್ಲಿ ಬೆಳೆದಿರುವ ಗಿಡಗಂಟಿ, ಕಳೆ ಸಸ್ಯಗಳನ್ನು ಜೆಸಿಬಿ, ಟ್ರ್ಯಾಕ್ಟರ್‌ ಮೂಲಕ ಸ್ವಚ್ಛತೆಗೊಳಿಸುವ ಮೂಲಕ ಅಧಿಕಾರಿಗಳು ‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ್ದಾರೆ.

ನಿರ್ವಹಣೆ ಇಲ್ಲದೆ ನಲುಗಿದ ‘ಲುಂಬಿನಿ’ ಎನ್ನುವ ಶೀರ್ಷಿಕೆಯಡಿ ‘ಪ್ರಜಾವಾಣಿ’ ಜುಲೈ 6ರಂದು ವಿಶೇಷ ವರದಿ ಪ್ರಕಟಿಸಿತ್ತು.

ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆಯಿಂದಲೇ ಲುಂಬಿನಿ ವನದಲ್ಲಿ ಬಿಡು ಬಿಟ್ಟು ಯಂತ್ರಗಳ ಸಹಾಯದಿಂದ ಹುಲ್ಲು, ಗಿಡಗಂಟಿ ತೆರವುಗೊಳಿಸಿದ್ದಾರೆ. ಅಲ್ಲದೇ 30ಕ್ಕೂ ಹೆಚ್ಚು ಕೂಲಿಯಾಳುಗಳಿಂದ ಸ್ವಚ್ಛತಾ ಕೆಲಸ ಮಾಡಿಸಿದ್ದಾರೆ.

ADVERTISEMENT

ಉದ್ಯಾನವನದಲ್ಲಿ ತಗ್ಗು ಪ್ರದೇಶವನ್ನು ಎತ್ತರಿಸುವ ಕೆಲಸ ಮಾಡಲಾಗುತ್ತಿದೆ. ಕೆರೆಯ ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿ ತೆರವುಗೊಳಿಸಲಾಗುತ್ತಿದೆ. ವಾಕಿಂಗ್‌ ಪಾಥ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು. ಬೆಳಿಗ್ಗೆಯಿಂದ ಸಂಜೆಯತನಕ ಕೆಲಸ ಮಾಡಲಾಗಿದ್ದು, ಉಳಿದ ಸ್ವಚ್ಛತೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ ಶಾಶ್ವತ ಶೌಚಾಲಯ ನಿರ್ಮಾಣಕ್ಕಾಗಿ ₹12 ಲಕ್ಷ, ಶುದ್ಧನೀರಿನ ಘಟಕ ಸ್ಥಾಪನೆಗೆ ₹5 ಲಕ್ಷ, ಸೇರಿದಂತೆ ವಿವಿಧ ಕೆಲಸಗಳಿಗೆ ಹೆಚ್ಚಿನ ಅನುದಾನವನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಮಹಿಳೆಯರು ಶೌಚಕ್ಕೆ ಸಮಸ್ಯೆ ಎದುರಿಸುತ್ತಿರುವುದು ವರದಿಯಲ್ಲಿ ಪ್ರಕಟಿಸಲಾಗಿತ್ತು.

‘ಮುಂದಿನ 15 ದಿನದಲ್ಲಿ ಲುಂಬಿನಿ ಉದ್ಯಾನವನಕ್ಕೆ ಹೊಸ ರೂಪ ನೀಡಲಾಗುವುದು. ವಿವಿಧ ಅಭಿವೃದ್ಧಿ ಕಾಮಗಾರಿಗೆ ಹಣ ಮಂಜೂರು ಮಾಡಲಾಗಿದೆ. ಹೀಗಾಗಿ ಕೆಲಸಗಳು ಶೀಘ್ರ ಆಗುತ್ತಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.