ಯಾದಗಿರಿ: ನೆರೆಯ ಜಿಲ್ಲೆಗಳಲ್ಲಿ ಮಳೆ ಕಾರಣ ತರಕಾರಿ ದರ ಏರಿಕೆಯಾಗಿದ್ದು, ಆ ಜಿಲ್ಲೆಗಳಿಂದ ಆವಕವಾಗುವ ಕಾಯಿಪಲ್ಲೆ ನಮ್ಮಲ್ಲಿಯೂ ಬೆಲೆ ಅಧಿಕವಾಗಿದೆ.
ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ತರಕಾರಿ ಬಿಡಿಸಲು ಅಲ್ಲಿ ಸಾಧ್ಯವಾಗಿಲ್ಲ. ಅದರ ಪರಿಣಾಮ ಜಿಲ್ಲೆಗೂ ತಟ್ಟಿದೆ. ಅಲ್ಲಿಂದ ಬರುವ ತರಕಾರಿ ದರ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ತರಕಾರಿಗಳಿಗೆ ಅನುಕೂಲವಾದರೂ ಬೆಳೆ ಅಧಿಕವಿಲ್ಲದಿದ್ದರಿಂದ ಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ.
ಟೊಮೆಟೊ ದರ ಅಧಿಕವಾಗುವ ಸಾಧ್ಯತೆ: ಟೊಮೆಟೊ ತರಕಾರಿ ಕಲಬುರಗಿ ಮತ್ತು ರಾಯಚೂರು ಜಿಲ್ಲೆ ಯಿಂದ ಆವಕವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳ ಮಾತಾಗಿದೆ.
ಇನ್ನೂ ತರಕಾರಿ ಬೆಲೆ ಒಂದು ಕೆಜಿಗೆ ₹40ರಿಂದ 80 ರ ತನಕ ಬೆಲೆ ಇದೆ. ಎಲ್ಲ ತರಕಾರಿಗಳು ₹10ರಿಂದ ₹20 ಅಧಿಕವಾಗಿದೆ. ಕಳೆದ ವಾರದಿಂದ ನುಗ್ಗೆಕಾಯಿ ದರ ಅಧಿಕವಾಗಿದ್ದು, ಕೆಜಿಗೆ ₹180 ರಿಂದ ₹200 ಬೆಲೆ ಇದೆ. ಇದು ಕೂಡ ಚಿಲ್ಲರೆ ಅಂಗಡಿಗಳಲ್ಲಿ ಸಿಗುತ್ತಿಲ್ಲ. ಬೆಳ್ಳುಳ್ಳಿ ₹90–100 ಕರಿಬೇವು ₹100 ಕೆಜಿ ಇದೆ.
ಸೊಪ್ಪುಗಳ ದರ: ತರಕಾರಿಗಳ ದರ ಅಧಿಕವಾದರೂ ಸೊಪ್ಪುಗಳ ಬೆಲೆ ಏರಿಕೆಯಾಗಿಲ್ಲ. ಕಳೆದ ವಾರದಂತೆ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ಮೆಂತೆ ಸೊಪ್ಪು ದೊಡ್ಡ ಗಾತ್ರದು ₹25–30, ಪಾಲಕ್ ಸೊಪ್ಪು ಒಂದು ಕಟ್ಟು ₹10, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹ 5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ದೊಡ್ಡ ಗಾತ್ರದು ಕಟ್ಟು ₹10–15, ಕೊತಂಬರಿ ಸೊಪ್ಪು ದೊಡ್ಡ ಗಾತ್ರದ ಒಂದು ಕಟ್ಟು ₹15–20 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹15–20 ದರ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.