ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಆನೂರು(ಬಿ)ಗ್ರಾಮ

ಶುದ್ಧ ಕುಡಿಯುವ ನೀರಿಲ್ಲ; ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕಷ್ಟ ಕೇಳುವವರಿಲ್ಲ...

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 12:26 IST
Last Updated 10 ಡಿಸೆಂಬರ್ 2019, 12:26 IST
ಸೈದಾಪುರ ಸಮೀಪದ ಆನೂರು.ಬಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು
ಸೈದಾಪುರ ಸಮೀಪದ ಆನೂರು.ಬಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು   

ಸೈದಾಪುರ: ಸಮೀಪದ ಆನೂರು (ಬಿ)ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಜನಪ್ರತಿ
ನಿಧಿಗಳು ಗಾಢನಿದ್ರೆಯಲ್ಲಿರುವಂತೆ ಕಾಣುತ್ತಿದೆ. ಗ್ರಾಮದಲ್ಲಿ 700 ರಿಂದ 800 ಜನಸಂಖ್ಯೆ ಇದ್ದು ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣಿಸುತ್ತಿದೆ.

2018ರಲ್ಲಿ ನಿರ್ಮಾಣವಾದ ಶುದ್ಧ ನೀರಿನ ಘಟಕವು ಪ್ರಾರಂಭವಾದ ಕೇವಲ ಒಂದು ವರ್ಷದಲ್ಲಿ ಸ್ಥಗಿತಗೊಂಡಿದೆ. ಇದಕ್ಕೆಸಮರ್ಪಕವಾದ ವಿದ್ಯುತ್ ಪೂರೈಕೆ ವ್ಯವಸ್ಥೆ ಇಲ್ಲ. ಹಾಗೆಯೇ ಇದಕ್ಕೆ ಸೀಮಿತವಾದ ನೀರಿನ ಕೊಳವೆ ಬಾವಿ ಇಲ್ಲ.

ನೀರು ಶುದ್ಧೀಕರಿಸುವ ಯಂತ್ರೋಪಕರಣಗಳು ಕಳಪೆಯಾಗಿವೆ. ಒಂದು ವರ್ಷದಲ್ಲಿ ಹಾಳಾಗಿವೆ. ಇದನ್ನು ಸರಿಪಡಿಸಲು ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಮುತುವರ್ಜಿ ವಹಿಸಿಲ್ಲ. ಜನರು ದೂರದ ಕೊಳವೆ ಬಾವಿಯ ನೀರನ್ನು ಕುಡಿಯಲು ಮತ್ತು ಬಳಸಲು ಅವಲಂಬಿಸಿದ್ದಾರೆ.

ADVERTISEMENT

ಸರ್ಕಾರಿ ಶಾಲೆಗೆ ಸ್ಥಳದ ಕೊರತೆ:ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಉತ್ತಮವಾಗಿ ಇದೆ. ಆದರೆ ಮಕ್ಕಳು ಸರಿಯಾದ ಆಟದ ಮೈದಾನ, ತರಗತಿ ಕೋಣೆಗಳ ಕೊರತೆ ಅನುಭವಿಸುತ್ತಿದ್ದಾರೆ. ಅದ್ದರಿಂದ ಸರ್ಕಾರ ಬೇರೆ ಕಡೆ ಸ್ಥಳ ಗುರುತಿಸಿ ಹೊಸ ಶಾಲೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಚರಂಡಿ ಸಮಸ್ಯೆ: ಸರಿಯಾದ ಚರಂಡಿ ಇಲ್ಲದೆ ಇರುವುದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿದು, ಮನೆಯ ಮುಂದಿನ ಅಂಗಳಗಲ್ಲಿ ಕೊಳಚೆ ನೀರು ತುಂಬಿ ಕೆಟ್ಟ ವಾಸನೆ ಬೀರುತ್ತಿದೆ. ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತಿದೆ.

ಹದಗೆಟ್ಟ ರಸ್ತೆ ಸಂಚಾರ ವ್ಯವಸ್ಥೆ: ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ವಾಹನಸಂಚಾರಕ್ಕೆ ಸುರಕ್ಷಿತವಾಗಿಲ್ಲ. ವಾಹನ ಸವಾರರು ಹರಸಾಹಸ ಪಡುತ್ತ , ಹಿಡಿಶಾಪ ಹಾಕುತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.