ADVERTISEMENT

ನರೇಗಾ ಕೂಲಿ ನೀಡಲು ಆಗ್ರಹ

ಕೃಷಿಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:31 IST
Last Updated 7 ಡಿಸೆಂಬರ್ 2022, 5:31 IST
ಯಾದಗಿರಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ನೀಡಲು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು
ಯಾದಗಿರಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ನೀಡಲು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು   

ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದ ಎಲ್ಲಾ ಕಾರ್ಮಿಕರಿಗೆ ಕೆಲಸ ನೀಡಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಿ, ಕೆಲಸ ನೀಡಿರುವ ದಿನಾಂಕ ಸಹಿತ 100 ದಿನಗಳನ್ನು ಜಾಬ್ ಕಾರ್ಡ್‌ನಲ್ಲಿ ನಮೂದಿಸಬೇಕು, ಬಾಕಿ ಇರುವ ಕೂಲಿ ಹಣವನ್ನು ಕೂಡಲೇ ಪಾವತಿ ಮಾಡಬೇಕು ಎಂದು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷ ಬಿ.ಭಗವಾನ್‌ರಡ್ಡಿ ಮಾತನಾಡಿ, ಐದು ತಿಂಗಳಿನಿಂದ ಉದ್ಯೋಗ ನೀಡದ ಕಾರಣ ನರೇಗಾ ಕಾರ್ಮಿಕರಿಗೆ ಈ ಕೂಡಲೇ ಐದು ತಿಂಗಳ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

‘ಈ ಹಿಂದೆ ಏಪ್ರಿಲ್‌ನಲ್ಲಿ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಆಗ ನೂರು ದಿನಗಳ ಕೆಲಸ ಕೊಡುವುದಾಗಿ ಭರವಸೆ ನೀಡಿದ ಅಧಿಕಾರಿಗಳು ಇಲ್ಲಿಯವರೆಗೂ ಕೇವಲ 34 ದಿನಗಳು ಮಾತ್ರ ಕೆಲಸ ಕೊಟ್ಟಿದ್ದಾರೆ. ಯರಗೋಳ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಒಂದು ವರ್ಷಗಳಿಂದ ಗಾಮ ಪಂಚಾಯಿತಿ ಅಧಿಕಾರಿಗಳಿಗೆ ಒತ್ತಾಯಿಸುತ್ತಾ ಬರಲಾಗಿದೆ. ಒತ್ತಾಯ ಮಾಡಿದಾಗ ಮಾತ್ರ ಸ್ವಲ್ಪ ದಿನಗಳ ಕಾಲ ಕೆಲಸ ನೀಡಿ ನಂತರ ಕೆಲಸದ ಸ್ಥಳದ ಅಭಾವ, ಬಜೆಟ್ ಕೊರತೆ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ‘ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ನೀಡುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿವೆ‘ ಎಂದು ಆಪಾದಿಸಿದರು.

‘ಈಗಾಗಲೇ ಉದ್ಯೋಗ ಖಾತ್ರಿ ಕೆಲಸಗಳು ನಡೆಯುತ್ತಿರುವ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಇತರರ ಒತ್ತಡಕ್ಕೆ ಮಣಿದು ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಕೆಲಸ ನೀಡದೆ ಕಾರ್ಮಿಕರನ್ನು ಸತಾಯಿಸಲಾಗುತ್ತಿದೆ. ಕೆಲಸ ನೀಡಿದರೂ ಕೂಲಿ ತಡೆ ಹಿಡಿಯಲಾಗುತ್ತಿದೆ. ಪಂಚಾಯಿತಿಗೆ ಅಲೆದು ಅಲೆದು ಕಾರ್ಮಿಕರು ಬೆಸತ್ತು ಕೆಲಸವೆ ಬೇಡ ಎನ್ನುವ ಅಭಿಪ್ರಾಯಕ್ಕೆ ಬರುವಂತೆ ವ್ಯವಸ್ಥಿತವಾಗಿ ಸಂಚು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ‘ ಎಂದರು.

ಜಿ.ಪಂ ಯೋಜನಾ ನಿರ್ದೇಶಕ ವೆಂಕಟೇಶ ಡಿ ಚಟ್ನಳ್ಳಿ ‘ಒಂದು ವಾರದ ಒಳಗಾಗಿ ಎಲ್ಲಾ ಕಾರ್ಮಿಕರಿಗೆ ಕೆಲಸ ಕೊಡುವುದು ಸೇರಿದಂತೆ ಮನವಿ ಪತ್ರದಲ್ಲಿನ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು‘ ಎಂದು ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಕಾರ್ಯದರ್ಶಿ ಭೀಮರಡ್ಡಿ ಹಿರೆಬಾನರ್, ಬಸವರಾಜ, ಭಾಷಖಾದಿರಿ, ಸಾಬಣ್ಣ ಜಗಲಿ ಶ್ರೀಮಂತ, ಹುಸೇನ್, ಚಂದ್ರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.