ಶಹಾಪುರ: ನಾಯ್ಕಡ್ ಹೆಸರಿನಲ್ಲಿ ಹಿಂದುಳಿದ ಜಾತಿಯ ತಳವಾರ ಜಾತಿಯವರಿಗೆ ಎಸ್ಟಿ (ಪರಿಶಿಷ್ಟ ಪಂಗಡ) ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರನ್ನು ವಜಾಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಬುಧವಾರ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಮುಖಂಡರು ಗ್ರೇಡ್-2 ತಹಶೀಲ್ದಾರ್ ಸೇತು ಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ತಹಶೀಲ್ದಾರ್ ಕಚೇರಿಯಿಂದ ತಾಲ್ಲೂಕಿನ ಭೀಮರಾಯನಗುಡಿಯ ಮಂಜುನಾಥ ಬೇನಾಳ ಹಾಗೂ ಕವಿತಾ ನಾಯಕೋಡಿ ಅವರಿಗೆ ಹಿಂದುಳಿದ ಜಾತಿಯ ನಾಯ್ಕಡ್ ಆಗಿದ್ದರು ಸಹ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಜಾತಿ ಪ್ರಮಾಣ ಪತ್ರ ವಿತರಿಸಿದ್ದಾರೆ. ತಕ್ಷಣ ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರವರ್ಗ-1ರಲ್ಲಿ ಬರುವ ಅಂಬಿಗ ತಳವಾರರಿಗೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ಕಂಡುಬಂದಿದ್ದು, ಇದರ ಬಗ್ಗೆ ಉನ್ನತಮಟ್ಟದ ತನಿಖಾ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಕೆಲ ಉನ್ನತ ಹುದ್ದೆಯ ಅಧಿಕಾರಿಗಳು ಶಾಮೀಲಾಗಿ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸುತ್ತಿದ್ದಾರೆ. ಈಗಾಗಲೇ ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಬೇಡ ಜಂಗಮ ಸಮುದಾಯದ ಅನನ್ಯ ರೇವಣಸಿದ್ದಯ್ಯ ಎನ್ನುವರಿಗೆ ವಿತರಿಸಿದ್ದಾರೆ. ಅದರಂತೆ ಪರಿಶಿಷ್ಟ ಪಂಗಡದ ಜಾತಿ ಹೆಸರಿನಲ್ಲಿ ನಾಯ್ಕಡ್ ಸಮುದಾಯಕ್ಕೆ ಸೇರಿದ ಇಬ್ಬರಿಗೆ ವಿತರಿಸುವ ಮೂಲ ನಿಜವಾದ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ವಂಚನೆ ಹಾಗೂ ಮೋಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಇಲ್ಲದೆ ಹೋದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಆರ್.ಚೆನ್ನಬಸ್ಸು ವನದುರ್ಗ, ನಾಗಪ್ಪ ಕಾಶಿರಾಜ, ಗೌಡಪ್ಪಗೌಡ ಆಲ್ದಾಳ, ಹಣಮಂತರಾಯ, ಟೋಕಾಪುರ,ಬಸಣ್ಣ ಭಂಗಿ ಕೊಳ್ಳೂರ, ಶೇಖರ ದೊರೆ,ಭೀಮಣ್ಣ ಬುದನೂರ, ಮಲ್ಲಿಕಾರ್ಜುನ ಶಿರವಾಳ, ಬಸಲಿಂಗಪ್ಪ ಮುಡಬೂಳ, ಅಮರೇಶ ಇಟಗಿ,ಶರಣಪ್ಪ ಪ್ಯಾಟಿ, ರಮೇಶ ಗಾಂಜಿ, ರಾಘವೇಂದ್ರ ಯಕ್ಷಿಂತಿ, ಯಲ್ಲಾಲಿಂಗ ಯಕ್ಷಿಂತಿ, ಮಹಾದೇವ ಶಾರದಹಳ್ಳಿ, ಯಂಕಣ್ಣ ಚೆನ್ನೂರ, ವೆಂಕಟೇಶ ಪರಸಾಪುರ, ಮಲ್ಲಪ್ಪ ದೊಡ್ಮನಿ, ಮಹಾದೇವ ನಾಗನಟಗಿ, ನಾಗರಾಜ ಹಳಿಸಗರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.