ADVERTISEMENT

ಶಹಾಪುರ | ಮೆಣಸಿನಕಾಯಿ ಧಾರಣೆ ಕುಸಿತ: ರೈತರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 15:45 IST
Last Updated 18 ಫೆಬ್ರುವರಿ 2024, 15:45 IST
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ರೈತರು ಮೆಣಸಿನಕಾಯಿ ಬೆಳೆ ಒಣಗಿಸುತ್ತಿರುವುದು
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ರೈತರು ಮೆಣಸಿನಕಾಯಿ ಬೆಳೆ ಒಣಗಿಸುತ್ತಿರುವುದು    

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದ ರೈತರಿಗೆ ಧಾರಣೆ ಕುಸಿತದಿಂದ ಸಂಕಷ್ಟ ಎದುರಾಗಿದೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮೆಣಸಿನಕಾಯಿ ಬೆಳೆದ ರೈತರು ಆಗ್ರಹಿಸಿದ್ದಾರೆ.

15 ದಿನದ ಹಿಂದೆ ಗುಂಟೂರ ತಳಿಯ ಮೆಣಸಿನಕಾಯಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹20 ರಿಂದ ₹25 ಸಾವಿರ ಆಸುಪಾಸಿನಲ್ಲಿ ಇದ್ದರೆ ಫೆ.18ರಂದು ₹13 ರಿಂದ ₹14 ಸಾವಿರಕ್ಕೆ ಧಾರಣೆ ಕುಸಿದಿದೆ. ಬ್ಯಾಡಗಿ ಮೆಣಸಿನಕಾಯಿ ಧಾರಣೆ ಪ್ರತಿ ಕ್ವಿಂಟಲ್‌ಗೆ ₹60 ಸಾವಿರ ಇತ್ತು. ಸದ್ಯ ₹25 ರಿಂದ ₹30 ಸಾವಿರಕ್ಕೆ ಕುಸಿತವಾಗಿದೆ ಎನ್ನುತ್ತಾರೆ ಮುಡಬೂಳ ಗ್ರಾಮದ ರೈತ ಸಂಗಣ್ಣ ಸಾಹು.

ಎಕರೆಗೆ ₹1ಲಕ್ಷ ವೆಚ್ಚ ಮಾಡಿದ್ದೇವೆ. ತುಸು ಮುಂಚಿತವಾಗಿ ಬಿತ್ತನೆ ಮಾಡಿದ ಬೆಳೆಯ ಇಳುವರಿ ಎಕರೆಗೆ 20 ರಿಂದ 25 ಕ್ವಿಂಟಲ್ ಬಂದಿದೆ. ಆದರೆ ಬೆಲೆ ಕುಸಿತದಿಂದ ಹೈರಾಣಗೊಂಡಿದ್ದೇವೆ. ಸ್ಥಳೀವಾಗಿ ಮೆಣಸಿನಕಾಯಿ ಬೆಳೆ ಮಾರಾಟ ಮಾಡಲು ಮಾರುಕಟ್ಟೆಯ ಕೊರತೆ ಇದೆ. ಅನಿವಾರ್ಯವಾಗಿ ಬ್ಯಾಡಗಿ ಇಲ್ಲವೆ ಸೋಲಾಪುರಕ್ಕೆ ತೆರಳಬೇಕು. ವಾಹನದ ಬಾಡಿಗೆ ಹಾಗೂ ದಿನೇ ದಿನೆ ಕುಸಿಯುತ್ತಿರುವ ಧಾರಣೆಯಿಂದ ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎನ್ನುತ್ತಾರೆ ರೈತ ಭೀಮಣ್ಣ ನಡಕರ್.

ADVERTISEMENT

‘ಬೆಲೆ ಕುಸಿತ ತಡೆಯಲು ಕೆಲ ತಿಂಗಳು ಮಟ್ಟಿಗಾದರು ಬೆಳೆ ಸಂರಕ್ಷಣೆ ಮಾಡಿ ಸಂಗ್ರಹಿಸಿ ಇಡಲು ಶೈತ್ಯಾಗಾರವಿಲ್ಲ. ಬೇರೆ ಕಡೆ ಯಾರೂ ಇಟ್ಟುಕೊಳ್ಳುತ್ತಿಲ್ಲ. ಜಾಗದ ಕೊರತೆ ಎದುರಾಗಿದೆ. ಕೆಲ ದಿನದ ಹಿಂದೆ ರಾಜ್ಯ ಸರ್ಕಾರ ನಬಾರ್ಡ್ ನೆರವಿನೊಂದಿಗೆ ರಾಜ್ಯದ ಆರು ಜಿಲ್ಲೆಯಲ್ಲಿ ಒದು ಶೈತ್ಯಾಗಾರವನ್ನು ಸ್ಥಾಪಿಸಲು ನಿರ್ಧರಿಸಿದೆ. ಆದರೆ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸಿದೆ. ಇಲ್ಲಿನ ಪ್ರದೇಶದಲ್ಲಿ ಸಾಕಷ್ಟು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಶೈತ್ಯಾಗಾರವನ್ನು ಸ್ಥಾಪಿಸಿ’ ಎಂದು ರೈತ ಮುಖಂಡ ಅಶೋಕ ಮಲ್ಲಾಬಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.