ADVERTISEMENT

ದಲಿತರ ಮೇಲಿನ ದೌರ್ಜನ್ಯ ತಡೆಯಲು ಆಗ್ರಹ

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 31 ಮೇ 2021, 16:32 IST
Last Updated 31 ಮೇ 2021, 16:32 IST
ದಲಿತರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ದಲಿತರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಯಾದಗಿರಿ: ರಾಜ್ಯಾದ್ಯಂತ ನಡೆದ ದಲಿತರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ ಪದಾಧಿಕಾರಿಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ,ಚಿಕ್ಕಮಗಳೂರಿನಲ್ಲಿ ಈಚೆಗೆ ನಡೆದ ದಲಿತ ಯುವಕನಿಗೆ ಮೂತ್ರ ನೆಕ್ಕಿಸಿದ ಘಟನೆ ಖಂಡನೀಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಜಯಪುರ ಜಿಲ್ಲೆಯಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಗದಗನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಬೆಳಗಾವಿ ರಾಮದುರ್ಗದಲ್ಲಿ ಅತ್ಯಾಚಾರ, ಸುರಪುರ ತಾಲ್ಲೂಕಿನ ಖಾನಾಪುರ ದಲಿತ ಬಸಪ್ಪನ ಮೇಲೆ ದೌರ್ಜನ್ಯ ನಡೆದಿದ್ದು, ಇವಿಷ್ಟು ಬೆಳಕಿಗೆ ಬಂದಿದ್ದು, ಇನ್ನು ಬೆಳಕಿಗೆ ಬಾರದ ಎಷ್ಟೋ ಘಟನೆಗಳು ನಡೆದಿವೆ ಎಂದು ದೂರಿದರು. ಸರ್ಕಾರ ದಲಿತರ ಹಿತ ಕಾಯುವಲ್ಲಿ ವಿಫಲವಾಗಿದೆ. ಕಠಿಣ ಕ್ರಮ ಕೈಗೊಂಡು ದೌರ್ಜನ್ಯ ನಿಯಂತ್ರಿಸುವಂತೆ ಒತ್ತಾಯಿಸಿದರು.

ADVERTISEMENT

ಇದರ ಜೊತೆಗೆ ಕೊರೊನಾ ಹಾವಳಿಯಿಂದ ಜನತೆ ನಲುಗಿ ಹೋಗಿದ್ದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಹಾಸಿಗೆ, ಆಮ್ಲಜನಕ, ವೆಂಟಿಲೇಟರ್‌ಗಳ ಸೌಲಭ್ಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸಂದರ್ಭದಲ್ಲಿ ಎಸ್‌ಸಿಪಿ, ಟಿಎಸ್‍ಪಿ ಯೋಜನೆಯಡಿ ದಲಿತರಿಗೆ ಮಾಸಿಕ ₹15,000 ಪರಿಹಾರ ನೀಡಬೇಕು. ಅಲ್ಲದೇ ಈ ಯೋಜನೆಯ ಹಣದ ದುರ್ಬಳಕೆ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು. ಕೊರೊನಾ ಲಸಿಕೆ ಹಾಗೂ ಫಂಗಸ್‌ಗೆ ಔಷಧಿ ಉಚಿತವಾಗಿ ನೀಡಬೇಕು.ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕುಎಂದು ಆಗ್ರಹಿಸಿದರು.

ಈ ವೇಳೆ ಗೋಪಾಲ ತೆಳಗೇರಿ, ಸೈದಪ್ಪ ಕೂಲೂರು, ಮಲ್ಲಿನಾಥ ಸುಂಗಲ್ಕರ್, ಶಿವು ಕುರಕುಂಬಳ, ಶಿವು ಗಿರೆಪ್ಪನೋರ, ಅಂಬೇಡ್ಕರ್ ವಾದ ತಾಲ್ಲೂಕು ಸಂಚಾಲಕ ನಿಂಗಪ್ಪ ಬೀರನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.