ADVERTISEMENT

ಜಾತಿಗೆ ಆದ್ಯತೆ ನೀಡದಿರಿ: ಬೆಳಮಗಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:33 IST
Last Updated 9 ಏಪ್ರಿಲ್ 2019, 16:33 IST
ಗುರುಮಠಕಲ್ ಪಟ್ಟಣದಲ್ಲಿ ಮಂಗಳವಾರ ಜರುಗಿದ ಕಾಂಗ್ರೆಸ್ ಬಂಜಾರ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಮಾತನಾಡಿದರು
ಗುರುಮಠಕಲ್ ಪಟ್ಟಣದಲ್ಲಿ ಮಂಗಳವಾರ ಜರುಗಿದ ಕಾಂಗ್ರೆಸ್ ಬಂಜಾರ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಮಾತನಾಡಿದರು   

ಗುರುಮಠಕಲ್: ‘ಲೋಕಸಭಾ ಚುನಾವಣೆಯು ಪಕ್ಷಗಳ ನಡುವಿನ ಚುನಾವಣೆಯೇ ಹೊರತು ಜಾತಿಗಳ ನಡುವಿನ ಚುನಾವಣೆಯಲ್ಲ. ಅಭಿವೃದ್ಧಿ ದೃಷ್ಟಿಯಲ್ಲಿ ಮತಚಲಾವಣೆ ಮಾಡಬೇಕಿದೆಯೇ ಹೊರತು, ಜಾತಿ ಪರಿಗಣಿಸಿ ಮತ ನೀಡಬೇಡಿ’ ಎಂದು ಮಾಜಿ ಸಚಿವ ರೇವೂನಾಯಕ ಬೆಳಮಗಿ ಸಲಹೆ ನೀಡಿದರು.

ಪಟ್ಟಣದಲ್ಲಿ ಮಂಗಳವಾರ ಜರುಗಿದ ಕಾಂಗ್ರೆಸ್‌ನ ಬಂಜಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ನಾನು ಸಚಿವನಾಗಿದ್ದಾಗ ರಾಜ್ಯದಾದ್ಯಂತ ತಿರುಗಾಡಿ ಬಂಜಾರ ಸಮುದಾಯದ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ ಮಾಡಿದ್ದೇನೆ. ಸಮಾಜದ ಋಣ ತೀರಿಸುವ ಹೊಣೆ ನನ್ನ ಮೇಲೆ ಇದುದ್ದರಿಂದಲೇ ಬಂಜಾರ ನಿಗಮದ ಸ್ಥಾಪನೆಯನ್ನು ಮಾಡಿಸಿದ್ದೇನೆ’ ಎಂದರು.

ADVERTISEMENT

‘ಡಾ.ಉಮೇಶ್ ಜಾಧವ್ ಅವರು ಜಾತಿಯ ಹೆಸರಿನಲ್ಲಿ ಮತ ಕೇಳುತ್ತಿರುವುದು ಖಂಡನೀಯ. ಇದು ಜಾತಿ ಚುನಾವಣೆಯಲ್ಲ. ಪಕ್ಷಗಳ ನಡುವಿನ ಚುನಾವಣೆಯಾಗಿದೆ. ನಾನು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದಂತೆ ಮಲ್ಲಿಕಾರ್ಜುನ ಖರ್ಗೆಯವರ ಪರ ಪ್ರಚಾರವನ್ನು ಮಾಡುತ್ತಿದ್ದೇನೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಖರ್ಗೆ ಅವರನ್ನು ಬಹುಮತದಿಂದ ಆರಿಸಿ ತರಬೇಕು’ ಎಂದು ಹೇಳಿದರು.

ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಅಧ್ಯಕ್ಷ ಸುಭಾಷ್ ರಾಠೋಡ್ ಮಾತನಾಡಿ,‘ಪಕ್ಷದ ಸಿದ್ಧಾಂತ, ಅಭಿವೃದ್ಧಿಯ ಹೆಸರಿನಲ್ಲಿ ಅವರು ಮತಯಾಚಿಸಲಿ. ಅದನ್ನು ಬಿಟ್ಟು ಜಾತಿಗಳ ನಡುವೆ ವಿಷವನ್ನು ಬಿತ್ತುವುದು ಬೇಡ. ಸಮಾಜವನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಲು ಅರಸು ಅವರ ಸಮಯದಲ್ಲಿ ಖರ್ಗೆಯವರು ಶ್ರಮಿಸಿದ್ದಾರೆ’ ಎಂದು ಹೇಳಿದರು.

ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಿಕಲ್, ಕಿಶನ್ ರಾಠೋಡ್, ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಖರ್ಗೆಗೆ ಮತನೀಡುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರೆಡ್ಡಿಗೌಡ ಅನಪುರ, ಸಿದ್ದಲಿಂಗರೆಡ್ಡಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣ ಚಪೆಟ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಷು ರಾಠೋಡ್, ಬ್ಲಾಕ್ ಅಧ್ಯಕ್ಷ ಮಹಿಪಾಲರೆಡ್ಡಿ, ವಿಶ್ವನಾಥ ನೀಲಹಳ್ಳಿ, ನಾಗನಾತರಾವ್, ಆನಂದ ಬೋಯಿನ್, ಬಸಣ್ಣ ದೇವರಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.