ಯಾದಗಿರಿ:‘ಭಕ್ತಿಯಿಂದ ಆಚರಿಸುವ ಎಲ್ಲಾ ಆಚರಣೆಗಳು ಶಿವನಿಗೆ ಸಂಪ್ರೀತಿಯನ್ನು ಉಂಟು ಮಾಡುತ್ತವೆ. ಮಹಾಶಿವರಾತ್ರಿ ಅತ್ಯಂತ ಶುಭ ಪ್ರದಾಯಕವಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಅದಕ್ಕಾಗಿ ಎಲ್ಲರೂ ಶಿವನನ್ನು ಶ್ರದ್ಧೆ, ನಿಷ್ಠೆಯಿಂದ ಪೂಜಿಸಬೇಕು’ ಎಂದುಅಬ್ಬೆತುಮಕೂರು ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಅಬ್ಬೆ ತುಮಕೂರಿನಶ್ರೀಮಠದಲ್ಲಿ ಮಹಾ ಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ಮಹಾಶಿವರಾತ್ರಿ ಪುಣ್ಯದಿನವಾಗಿದ್ದು, ಈ ಪರ್ವ ಕಾಲದಲ್ಲಿ ಶಿವನನ್ನು ಭಜಿಸುವ ಎಲ್ಲರಿಗೂ ಸನ್ಮಂಗಳ
ಉಂಟಾಗಲಿ. ಹೀಗಾಗಿ ಭಕ್ತರು ಶ್ರದ್ಧೆಯಿಂದ ಭಕ್ತಿಯನ್ನು ಅರ್ಪಿಸಬೇಕು’ ಎಂದರು.
‘ಇದೇ 28ರಂದು ವಿಶ್ವಾರಾಧ್ಯರ ರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಪೂರ್ವ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿದ್ದು, ಅನೇಕ ಭಕ್ತರು ಸೇವಾಧಾರಿಗಳಾಗಿ ಪೂರ್ವ ಸಿದ್ಧತೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೆರಡು ದಿನದಲ್ಲಿ ಸಂಪೂರ್ಣ ಸಿದ್ದತೆಗಳು ಮುಗಿಯಲಿವೆ’ ಎಂದು ತಿಳಿಸಿದರು.
‘ವೈಭವದಿಂದ ನಡೆಯುವ ಜಾತ್ರೆಗೆ ರಾಜ್ಯ ಮತ್ತು ನೆರೆ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರೆಲ್ಲರಿಗೂ ಜಾತ್ರೆಯಲ್ಲಿ ಸುಸಜ್ಜಿತವಾದ ವ್ಯವಸ್ಥೆ ಮಾಡಲು ಸ್ವಯಂ ಸೇವಕರು ತಯಾರಿ ಮಾಡಿದ್ದಾರೆ. ಭಕ್ತರಿಗೆ ನಿರಂತರ ಅನ್ನದಾಸೋಹ, ಜ್ಞಾನ ದಾಸೋಹ ಕಾರ್ಯದ ಜೊತೆಗೆ 5 ದಿನಗಳ ಕಾಲ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ’ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಚೆನ್ನಪ್ಪಗೌಡ ಮೋಸಂಬಿ, ಶರಣಪ್ಪಗೌಡ ಮಲ್ಹಾರ, ಡಾ.ಸುಭಾಶ್ಚಂದ್ರ ಕೌಲಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.