ADVERTISEMENT

ಸೈದಾಪುರ: ಉಪತಹಶೀಲ್ದಾರ್ ಕಚೇರಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 15:58 IST
Last Updated 16 ಸೆಪ್ಟೆಂಬರ್ 2020, 15:58 IST
ಸೈದಾಪುರ ಪಟ್ಟಣದ ಉಪತಹಶೀಲ್ದಾರ್ ಕಚೇರಿ ಒಳಗಡೆ ಮಳೆ ನೀರು ನುಗ್ಗಿರುವುದು
ಸೈದಾಪುರ ಪಟ್ಟಣದ ಉಪತಹಶೀಲ್ದಾರ್ ಕಚೇರಿ ಒಳಗಡೆ ಮಳೆ ನೀರು ನುಗ್ಗಿರುವುದು   

ಸೈದಾಪುರ: ಕಳೆದ ಮೂರು-ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಸೈದಾಪುರ ಉಪತಹಶೀಲ್ದಾರ್ ಕಚೇರಿಗೆ ಮಳೆ ನೀರು ನುಗ್ಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಮಳೆಯು ಪ್ರಾರಂಭಗೊಳ್ಳುತ್ತಿದೆ. ಅದರಂತೆ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯು ಉಪತಹಶೀಲ್ದಾರ್ ಕಚೇರಿ ಒಳಗೆ ನೀರು ನುಗ್ಗಿ ಕಚೇರಿಯಲ್ಲಿರುವ ಗಣಕ ಯಂತ್ರಗಳು, ವಿವಿಧ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವಂತಹ ಕಪಾಟುಗಳು ಸೇರಿದಂತೆ ಎಲ್ಲವು ನೀರಿನಲ್ಲಿ ಮುಳುಗಡೆಯಾಗಿ ಸಿಬ್ಬಂದಿ ಕಾರ್ಯ ನಿರ್ವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೇ ಈ ಕಟ್ಟಡವು ಶಿಥಿಲಾವಸ್ಥೆ ತಲುಪಿದೆ. ಪ್ರತಿ ಬಾರಿ ಮಳೆ ಬಂದರೆ ಸಾಕು ಇದು ಸೋರುತ್ತದೆ. ಇದರಿಂದ ವಿದ್ಯುತ್ ಕಡಿತಗೊಳಿಸಬೇಕಾಗುತ್ತದೆ. ವಿದ್ಯುತ್ ಇಲ್ಲವಾದರೆ ಯಂತ್ರಗಳ ಕೆಲಸ ನಿಂತು ಹೋಗುತ್ತದೆ. ಎಲ್ಲವೂ ಸರಿಯಾಗಬೇಕೆಂದರೆ ಎರಡು-ಮೂರು ದಿನಗಳು ಬೇಕಾಗುತ್ತದೆ. ಇದರಿಂದ ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೈತರು ತಮ್ಮ ಹೊಲದ ಪಹಣಿಗಳನ್ನು ತೆಗೆದುಕೊಳ್ಳಲು ಪರದಾಡುವಂತಾಗಿದೆ.

ADVERTISEMENT

ಈ ಕಟ್ಟಡದಲ್ಲಿ ಪ್ರಸ್ತುತ ನೆಮ್ಮದಿ ಕೇಂದ್ರ, ಆಧಾರ ಕೇಂದ್ರ, ಭೂಮಿ, ಉಪ ತಹಶೀಲ್ದಾರ್ ಕಾರ್ಯಾಲಯ ಕಾರ್ಯ ನಿರ್ವಹಿಸುತ್ತಿವೆ. ನೀರು ಸೋರುವುದರಿಂದ ಕೆಲವೊಂದು ಮುಖ್ಯ ದಾಖಲೆಗಳು ಹಾಳಾಗುತ್ತಿವೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಉಪತಹಶೀಲ್ದಾರ್ ಕಚೇರಿಯು ಪಿ.ಡಬ್ಲು.ಡಿ ಎಂಜಿನಿಯರಿಂಗ್ ವಿಶ್ರಾಂತಿ ಗೃಹವಾಗಿದೆ. ಆದರೆ ಈ ಕಾರ್ಯಾಲಯಕ್ಕೆ ಪ್ರತ್ಯೇಕ ಕಟ್ಟಡ ಇಲ್ಲ. ಆದ ಕಾರಣ ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಉಪತಹಶೀಲ್ದಾರ್ ಕಚೇರಿಯನ್ನು ಬೇರೆ ಕಡೆಗೆ ವರ್ಗಾಯಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬಂಜಾರು ಸಮಾಜದ ಮುಖಂಡ ಅರ್ಜುನ ಚವ್ಹಾಣ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.