ಪ್ರಾತಿನಿಧಿಕ ಚಿತ್ರ
ಯಾದಗಿರಿ: ‘ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಕ್ರೈಸ್ತ ಟ್ಯಾಗ್ ತೆಗೆದು ಆಯೋಗ ಸ್ಪಷ್ಟನೆ ನೀಡಬೇಕು’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವರ್ಗಿಕರಣದ ವಿಷಯ ಇನ್ನೂ ಬಗೆಹರಿದಿಲ್ಲ, ಅಲ್ಲಿಯೇ ಇರುವ ಸಾಕಷ್ಟು ಗೊಂದಲಗಳನ್ನು ನಿವಾರಣೆ ಮಾಡಲು ಆಗದ ಸರ್ಕಾರ ಈಗ ಕ್ರ್ರೈಸ್ತ ಪದದಿಂದ ಮತ್ತಷ್ಟು ಗೊಂದಲ ಮೂಡಿಸಿ ಏನು ಸಾಧನೆ ಮಾಡಲು ಹೊರಟಿದೆ ಎಂದು ಪ್ರಶ್ನಿಸಿದರು.
ಸಮೀಕ್ಷಾ ಕಾರ್ಯದ ಬಳಿಕ ಒಳಮೀಸಲಾತಿಯ ಹಂಚಿಕೆಯ ದಿಕ್ಕು ತಪ್ಪಿಸಲು ಸರ್ಕಾರ ಮುಂದಾಗಿದೆ. 33 ಜಾತಿಗಳನ್ನು ತೆಗೆದುಹಾಕಿರುವ ಆಯೋಗ ಪರಿಶಿಷ್ಟ ಜಾತಿಗಳನ್ನೇ ಯಾಕೆ ಉಳಿಸಿಕೊಂಡಿದೆ ಇದು ಆತಂಕದ ಬೆಳವಣಿಗೆ ಎಂದರು.
ಕ್ರಮಬದ್ದತೆಯೇ ಇಲ್ಲದ ಜಾತಿ ಸಮೀಕ್ಷೆ ಮಾಡುವ ಅಗತ್ಯ ಏನಿತ್ತು. ಎರಡು ತಿಂಗಳ ಹಿಂದೆಯೇ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ. ಇದಕ್ಕೆ ₹150 ಕೋಟಿ ಖರ್ಚು ಸಹ ಮಾಡಿದೆ. ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಬಿಜೆಪಿ ಮುಖಂಡರಾದ ರಾಚಣ್ಣಗೌಡ ಮುದ್ನಾಳ, ನಾಗರತ್ನ ಕುಪ್ಪಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ದೇವೇಂದ್ರನಾಥ ನಾದ್, ಸಿದ್ದಣ್ಣಗೌಡ ಕಾಡಂನೋರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಪರಶುರಾಂ ಕುರಕುಂದಾ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.