ವಡಗೇರಾ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೊದಲ ಅಂತಸ್ತಿನಲ್ಲಿ ಭೂ ಸೇನಾ ನಿಗಮದ ವತಿಯಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಶಾಲೆ ಕೋಣೆಯ ಕಾಮಗಾರಿಯು ಕಳಪೆಯಾಗಿದೆ. ಕ್ಯೂರಿಂಗ್(ನೀರು ಸಿಂಪರಣೆ) ಇಲ್ಲದೆ ಕಂಬಗಳಿಂದ ಸಿಮೆಂಟ್ ಉದುರುತ್ತಿದೆ ಎಂದು ಕರವೇ ತಾಲ್ಲೂಕು ಅದ್ಯಕ್ಷ ಅಬ್ದುಲ್ ಚಿಗಾನೂರ ದೂರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಯಮದ ಪ್ರಕಾರ ಸಿಮೆಂಟ್ನ ಪಿಲ್ಲರ್ಗಳಿಗೆ ಅಳವಡಿಸಿದ ಕಬ್ಬಿಣದ ಪ್ಲೆಟ್ಗಳನ್ನು ಕಂಬ ನಿರ್ಮಿಸಿದ ಮರುದಿನ ಅವುಗಳನ್ನು ತೆಗೆದು ಕ್ಯೂರಿಂಗ್ ಮಾಡಬೇಕು. ಆದರೆ ಕಳೆದ 15 ದಿನಗಳ ಹಿಂದೆ ಸಿಮೆಂಟ್ ಪಿಲ್ಲರ್ಗಳನ್ನು ನಿರ್ಮಿಸಲಾಗಿದೆ. ಆದರೆ ಈವರೆಗೂ ಅಳವಡಿಸಿರುವ ಕಬ್ಬಣದ ಪ್ಲೆಟ್ಗಳನ್ನು ತೆಗೆದಿಲ್ಲ. ಕ್ಯೂರಿಂಗ್ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಇಂತಹ ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ದಿಢೀರ್ ಎಂದು ಕುಸಿದರೆ ಮಕ್ಕಳ ಪ್ರಾಣ ಹಾನಿಯಾಗುತ್ತದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಕಬ್ಬಿಣದ ಪ್ಲೇಟ್ ತೆಗೆಯದೆ ಕ್ಯೂರಿಂಗ್ ಇಲ್ಲದೆ ನಿರ್ಮಿಸುತ್ತಿರುವ ಕಳಪೆ ಮಟ್ಟದ ವರ್ಗ ಕೋಣೆಯ ಕಾಮಗಾರಿಯನ್ನು ಕೂಡಲೆ ನಿಲ್ಲಿಸಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕಾಮಗಾರಿ ಪರಿಶೀಲಿಸಬೇಕು. ತಪ್ಪಿತಸ್ಥ ಜೆಇ ವಿರುದ್ಧ ಕ್ರಮಕೈಗೊಳ್ಳಬೇಕು. ಒಂದು ವೇಳೆ ಈ ಬಗ್ಗೆ ಬಗ್ಗೆ ನಿಷ್ಕಾಳಜಿ ತೋರಿದರೆ, ಕರವೇಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.