ವಡಗೇರಾ: ವಿದ್ಯಾರ್ಥಿಗಳು ಪಾಠಗಳನ್ನು ಕೇಳುವುದರ ಜೊತೆಗೆ ಪ್ರಾಯೋಗಿಕವಾಗಿ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕು ಎಂದು ವಿಜ್ಞಾನ ಸಂವಹನಕಾರ ಸಾಬಣ್ಣ ಭೋಸ್ಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ಹೈಯಾಳ (ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಬುರ್ಗಿ ಜಿಲ್ಲಾ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ವಸ್ತು ಸಂಗ್ರಹಾಲಯ ಸಹಯೋಗದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು.
ಸಂಚಾರಿ ವಾಹನದ ಮೂಲಕ ಪ್ರತಿಯೊಂದು ಶಾಲೆಯ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ನೀಡುವ ಕಾರ್ಯಕ್ರಮ ಇದಾಗಿದೆ.
ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನೀರಿನಿಂದ ಬರುವ ಕಾಯಿಲೆಗಳು, ಭೂಮಿಯ ಮೇಲೆ ನೀರಿನ ಪ್ರಮಾಣ, ಮಾನವನ ದೇಹದಲ್ಲಿ ನೀರಿನ ಪ್ರಮಾಣ ಕುರಿತು ಮಾಹಿತಿ ನೀಡಿದರು. ರಸಾಯನಶಾಸ್ತ್ರದ ಆವರ್ತಕ ಕೋಷ್ಟಕ, ಮಿಶ್ರಲೋಹಗಳು, ರಾಸಾಯನಿಕ ಅಯಾನುಗಳು, ಬ್ಯಾಟರಿ, ಹೈಡ್ರೋಜನ್ ಮೌಲ್ಯ, ಚಂದ್ರಯಾನ 1& 2, ಆಹಾರ ಸಂರಕ್ಷಣೆ, ಮಾನವನ ಭಾವನೆಗಳು, ರಾಸಾಯನಿಕ ಚಕ್ರ ಕುರಿತು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ದೂರದರ್ಶಕದ ಸಹಾಯದಿಂದ ಶುಕ್ರ ಗ್ರಹದ ಹಾಗೂ ಚಂದ್ರನ ವೀಕ್ಷಣೆ ಮಾಡಿದರು. ನಾಗೇಶ ಪಾಟೀಲ, ಗದಿಗಯ್ಯ ಸ್ವಾಮಿ, ಬ್ರಹ್ಮಾನಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.