ಶಹಾಪುರ: ‘ಜಾತಿ ಪ್ರಮಾಣ ಪತ್ರ ನೀಡುವ ಮುನ್ನ ಸಂಬಂಧಿಸಿದ ವ್ಯಕ್ತಿ ಎಸ್ಟಿಗೆ ಸೇರಿರುವ ಬಗ್ಗೆ ಅಧಿಕಾರಿ ಖಚಿತ ಪಡಿಸಿಕೊಳ್ಳಬೇಕು. ನೈಜತೆ ಇದ್ದರೆ ಮಾತ್ರ ಪ್ರಮಾಣ ಪತ್ರ ನೀಡಬೇಕು’ ಎಂದು ಯಾದಗಿರಿ ಜಿಲ್ಲಾಧಿಕಾರಿ ತಹಶೀಲ್ದಾರ್ಗಳಿಗೆ ಶುಕ್ರವಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸರ್ಕಾರದ ಸುತ್ತೋಲೆ ಪ್ರಕಾರ ನಾಯ್ಕಡ್, ನಾಯಕ ಪರ್ಯಾಯ ಪದಗಳಾದ (ಪರಿವಾರ ಮತ್ತು ತಳವಾರ) ಎಸ್ಟಿಗೆ ಸೇರಿದ್ದು, ಕೇಂದ್ರ ಸರ್ಕಾರದ ಗೆಜೆಟ್ ಪ್ರಕಾರ ಪ್ರಮಾಣ ಪತ್ರ ನೀಡಬಹುದು.ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರ ತಹಶೀಲ್ದಾರ್ ಅವರಿಗಿದ್ದು ಎಲ್ಲ ವಿಧಾನ ಪರಿಶೀಲಿಸಿ, ನಿಯಮ ಪಾಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ಸಹ ಗೊಂದಲ ಉಂಟು ಮಾಡಿದೆ ಎನ್ನುವುದಕ್ಕೆ ‘ಹಿಂದುಳಿದ ವರ್ಗದಲ್ಲಿಯೂ ಸಹ ತಳವಾರ ಮತ್ತು ಪರಿವಾರ ಜಾತಿಗಳಿವೆ. ಅವರಿಗೆ ಎಸ್ಟಿ ಪ್ರಮಾಣ ಪತ್ರ ನೀಡಲು ಅವಕಾಶವಿದಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಉನ್ನತ ಅಧಿಕಾರಿಗಳಲ್ಲೇ ಈ ಬಗ್ಗೆ ಗೊಂದಲವಿದೆ ಎಂದು ವಾಲ್ಮೀಕಿ ನಾಯಕ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಇದನ್ನು ತಪ್ಪಾಗಿ ಅರ್ಥೈಯಿಸಿಕೊಂಡ ಶಹಾಪುರ ಗ್ರೇಡ್-2 ತಹಶೀಲ್ದಾರ್ ಭೀಮರಾಯನಗುಡಿಯ ಮಂಜುನಾಥ ಹಾಗೂ ಕವಿತಾ ಎನ್ನುವರಿಗೆ ಮಂಗಳವಾರ (ನ.22) ತಳವಾರ ಹಿಂದುಳಿದ ಸಮುದಾಯಕ್ಕೆ ಸೇರಿದದ್ದರೂ ಎಸ್ಟಿ ಪ್ರಮಾಣ ಪತ್ರ ನೀಡಿ ವಂಚನೆ ಮಾಡಿದ್ದಾರೆ ಎಂದು ವಾಲ್ಮೀಕಿ ನಾಯಕ ಸಂಘದ ಮುಖಂಡ ಮಹಾದೇವಪ್ಪ ಶಾರದಹಳ್ಳಿ ಆರೋಪಿಸಿದರು.
ವಾಲ್ಮೀಕಿ ನಾಯಕ ಸಂಘದ ಮುಖಂಡರು ಬುಧವಾರ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದಾಗ ಎಚ್ಚೆತ್ತುಕೊಂಡು ಗ್ರೇಡ್-2 ತಹಶೀಲ್ದಾರ್ ಸೇತು ಮಾಧವ ಕುಲಕರ್ಣಿ ‘ವಿತರಿಸಿದ ಪ್ರಮಾಣ ಪತ್ರ ತಡೆಹಿಡಿದು ಎಸಿ ಕೋರ್ಟ್ನಲ್ಲಿ ಬಾಕಿ ಎಂದು ಹಿಂಬರಹ ನೀಡಿದ್ದಾರೆ. ಇದಕ್ಕೆ ನೇರ ಹೊಣೆ ಕಂದಾಯ ಇಲಾಖೆಯ ಅಧಿಕಾರಿಗಳು ಎಂದು ಅವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.