ADVERTISEMENT

ಶಹಾಪುರ: ಮತ್ತೆ ಪ್ರವಾಹದ ಆತಂಕ

ಶಹಾಪುರ, ವಡಗೇರಾ ತಾಲ್ಲೂಕಿನ ಭೀಮಾನದಿ ದಂಡೆಯಲ್ಲಿ 24 ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:48 IST
Last Updated 21 ಸೆಪ್ಟೆಂಬರ್ 2020, 1:48 IST
ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಬಳಿಯ ಭೀಮಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಭಾನುವಾರ ನದಿ ದಂಡೆಯ ಜಮೀನಿನಲ್ಲಿ ನೀರು ಸಂಗ್ರಹವಾಗಿದೆ
ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಬಳಿಯ ಭೀಮಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಭಾನುವಾರ ನದಿ ದಂಡೆಯ ಜಮೀನಿನಲ್ಲಿ ನೀರು ಸಂಗ್ರಹವಾಗಿದೆ   

ಶಹಾಪುರ/ವಡಗೇರಾ: ಶಹಾಪುರ ತಾಲ್ಲೂಕಿನ 10 ಹಾಗೂ ವಡಗೇರಾ ತಾಲ್ಲೂಕಿನ 14 ಹಳ್ಳಿಗಳು ಭೀಮಾ ನದಿ ದಂಡೆಯ ವ್ಯಾಪ್ತಿಗೆ ಬರುತ್ತಿವೆ. ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಭೀಮಾನದಿಗೆ 64 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಸದ್ಯಕ್ಕೆ ನದಿ ದಂಡೆಯ ಗ್ರಾಮಗಳಿಗೆ ಸಮಸ್ಯೆಯಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಹಾಪುರ ತಹಶೀಲ್ದಾರ್ ಜಗನಾಥರಡ್ಡಿ ತಿಳಿಸಿದ್ದಾರೆ.

ಅದರಲ್ಲಿ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ಗೇಟ್ ಎತ್ತರಿಸುವ ಹಾಗೂ ಇಳಿಸುವ ಬಗ್ಗೆ ಸುಸಜ್ಜಿತವಾಗಿ ಇಡುವಂತೆ ಕೆಬಿಜೆಎನ್ಎಲ್ ನಿಗಮದ ಎಂಜಿನಿಯರ್ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ. ಯಾವುದೇ ಸಂದರ್ಭದಲ್ಲಿ ಹೆಚ್ಚಿನ ನೀರು ನದಿಗೆ ಬಂದರೆ ಗೇಟ್ ಎತ್ತರಿಸಲು ಮೇಲಧಿಕಾರಿಗಳ ಆದೇಶದಂತೆ ಸೂಚಿಸಲಾಗಿದೆ ಎಂದರು.

ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆಯಾಗಲಿರುವ ಹುರಸಗುಂಡಗಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಗ್ರಾಮದಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡಲಾಗಿದೆ ಎಂದರು.

ADVERTISEMENT

ಭೀಮಾ ನದಿಗೆ ಹೆಚ್ಚಿನ ನೀರು ಬಂದರೆ ಶಹಾಪುರ ತಾಲ್ಲೂಕಿನ ಶಿರವಾಳ, ಅಣಬಿ, ಹೊಸೂರ, ರೋಜಾ ಮುಂತಾದ ಹಳ್ಳಿಗಳಿಗೆ ಸಮಸ್ಯೆಯಾಗುತ್ತದೆ. ಈಗಾಗಲೇ ಭೀಮಾ ದಂಡೆಯ ಜಮೀನುಗಳಲ್ಲಿ ಭತ್ತ, ಹತ್ತಿಬೆಳೆ ಬಿತ್ತನೆ ಮಾಡಿದ್ದು ಪ್ರವಾಹದಿಂದ ಆತಂಕ ಶುರುವಾಗಿದೆ ಎಂದು ನದಿ ದಂಡೆಯ ಜನರು ತಿಳಿಸಿದರು.

ಅದರಂತೆ ವಡಗೇರಾ ತಾಲ್ಲೂಕಿನ ಶಿವನೂರ, ಜೋಳದಡಗಿ, ಮಾಚನೂರ ಮುಂತಾದ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿವೆ. ನದಿ ದಂಡೆಯ ಗ್ರಾಮಸ್ಥರು ನದಿಯಲ್ಲಿ ಇಳಿಯಬಾರದು ಎಂದು ಆಯಾ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡಿದೆ. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜೋಳದಡಗಿ ಬ್ರಿಜ್ ಕಂ ಬ್ಯಾರೇಜ್ ಗೇಟ್ ತೆಗೆದು ಹಾಕಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಕಂದಾಯ ನಿರೀಕ್ಷಕ ಸಂಜೀವಪ್ಪ ಕವಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.