ಶಾಲೆ
(ಸಾಂಕೇತಿಕ ಚಿತ್ರ)
ಶಹಾಪುರ: ಸರ್ಕಾರ ಸುತ್ತೋಲೆ ಹೊರಡಿಸಿ ಸೆ.20 ರಿಂದ ಅ.7ವರೆಗೆ ದಸರಾ ರಜೆ ಘೋಷಣೆ ಮಾಡಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದೆ ಎಂದಿನಂತೆ ಶಾಲೆಗಳು ಆರಂಭಿಸಿದೆ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ದಸರಾ ರಜೆ ಭಾಗ್ಯವಿಲ್ಲ ಎಂಬ ಕೂಗು ಪಾಲಕರಿಂದ ಕೇಳಿ ಬರುತ್ತಿದೆ.
‘ಶಾಸಗಿ ಶಾಲೆಗಳು ಸರ್ಕಾರದ ಆದೇಶ ಚಾಚು ತಪ್ಪದೆ ಪಾಲಿಸುತ್ತೇವೆ ಎಂದು ಲಿಖಿತವಾಗಿ ಬರೆದು ಪರವಾನಿಗೆ ಪಡೆಯುತ್ತದೆ. ನಂತರ ತಮ್ಮದೇ ಕಾನೂನು ಜಾರಿ ಮಾಡಿಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸುವುದು ಹಲವಾರು ವರ್ಷದಿಂದ ನಡೆದುಕೊಂಡು ಬಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಭಾವ ಬಳಸಿಕೊಂಡು ರಾಜಾರೋಷವಾಗಿ ದಸರಾ ರಜೆಯಲ್ಲಿಯೂ ಶಾಲೆ ಆರಂಭಿಸಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.
ಶಾಲೆಗಳಿಗೆ ದಸರಾ ರಜೆ ಇರುವುದರಿಂದ ಕುಟುಂಬ ಸಮೇತ ತಮ್ಮೂರಿಗೆ ತೆರಳಬೇಕು ಎನ್ನುವ ಪಾಲಕರಿಗೆ ಭ್ರಮನಿರಸನವಾಗಿದೆ. ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ರಜೆ ಇಲ್ಲ, ಶಾಲೆಗೆ ಬರಲೇಬೇಕು ಎಂದು ಒತ್ತಡ ಹಾಕುತ್ತಾರೆ.
ಶಾಲೆಯಲ್ಲಿ ಪರೀಕ್ಷೆ ನಡೆದಿವೆ. ನಿಮ್ಮ ಮಕ್ಕಳು ಶಾಲೆ ಬಿಟ್ಟರೆ ಗೈರು ಹಾಜರಿ ತೆಗೆದುಕೊಳ್ಳುತ್ತೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಬೆದರಿಕೆ ಹಾಕುತ್ತಾರೆ. ಅನಿವಾರ್ಯವಾಗಿ ಮಕ್ಕಳ ಸಲುವಾಗಿ ನಾವು ಮನೆಯಲ್ಲಿ ಉಳಿದುಕೊಳ್ಳುವಂತೆ ಆಗಿದೆ ಎಂದು ಮಕ್ಕಳ ಪಾಲಕರು ಆರೋಪಿಸುತ್ತಿದ್ದಾರೆ.
ಓದಿನ ನಡುವೆ ಒಂದಿಷ್ಟು ಬಿಡುವು ಮಾಡಿಕೊಂಡು ಮಕ್ಕಳು ದಸರಾ ರಜಾ ಮಜಾದಲ್ಲಿ ಕಾಲ ಕಳೆಯಲಿ ಎನ್ನುವು ಸದುದ್ದೇಶದಿಂದ ಸರ್ಕಾರವು ಶಿಕ್ಷಣ ತಜ್ಞರ ವರದಿ ಆಧರಿಸಿ ಜಾರಿಗೆ ತಂದಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅದು ಅಪತ್ಯವಾಗಿ ಕಾಡುತ್ತಲಿದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.