
ಸೈದಾಪೂರ: ‘ಸಿದ್ದರಾಮಯ್ಯನವರು ತಮ್ಮ ದೀರ್ಘಾವಧಿ ಆಡಳಿತದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಹಿಂದುಳಿದ ವರ್ಗಗಳ ಪಾಲಿನ ದೇವರಾಗಿದ್ದಾರೆ’ ಎಂದು ಕೆಪಿಸಿಸಿ ಸದಸ್ಯ ಶರಣಪ್ಪ ಡಿ.ಮಾನೇಗಾರ ಯರಗೋಳ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯನವರು ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಿದ್ಧರಾಮಯ್ಯನವರ ಅಭಿಮಾನಿ ಬಳಗ ಹಾಗೂ ಸಮಾಜದ ಬಾಂಧವರು ಬುಧವಾರ ಮುಖ್ಯಮಂತ್ರಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಡಳಿತಾವಧಿಯ ದಾಖಲೆಯನ್ನು ಸಿದ್ದರಾಮಯ್ಯನವರು ಮುರಿದಿದ್ದಾರೆ. ಅವರೇ ಪೂರ್ಣ ಅವಧಿಗೆ ಸಿಎಂ ಆಗಿ ಮುಂದುವರಿಯಲಿ’ ಎಂದರು.
ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ಮಾತನಾಡಿದರು. ಇದಕ್ಕೂ ಡೊಳ್ಳು ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಿಎಂ ಅವರ ಭಾವಚಿತ್ರದ ಮೆರವಣಿಗೆ ನಡೆಸಿ ಕನಕ ವೃತ್ತದಲ್ಲಿ ಹಾಲಿನ ಅಭಿಷೇಕ ಮಾಡಿದರು. ನಂತರ ಭರ್ಜರಿ ಬಾಡೂಟ ಸವಿಯುವ ಮೂಲಕ ಸಂಭ್ರಮಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶರಣಿಕ ಕುಮಾರ ದೋಖಾ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರಡ್ಡಿ ಪಾಟೀಲ ಶೆಟ್ಟಿಹಳ್ಳಿ, ಚಂದ್ರಶೇಖರ ವಾರದ , ಪ್ರಭುಲಿಂಗ ವಾರದ , ವಿಶ್ವನಾಥ ನೀಲಹಳ್ಳಿ, ಬಸವರಾಜಪ್ಪ ಬಾಗ್ಲಿ, ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಕೃಷ್ಣಾ ಚಪೆಟ್ಲಾ, ರವಿಕುಮಾರ್ ಕಡೇಚೂರ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.