ಸುರಪುರದ ಜನನಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಶಹಾಪುರ ಎಸ್ಡಿಎಂ ಮಹಿಳಾ ಕಾಲೇಜು ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಉದ್ಘಾಟಿಸಿದರು
ಸುರಪುರ: ‘ಗಂಡು ಮಕ್ಕಳಂತೆ ಹೆಣ್ಣುಮಕ್ಕಳಿಗೂ ಪಾಲಕರು ಓದಲು ಸಮಾನ ಅವಕಾಶ ನೀಡಬೇಕು. ಈಗ ವಿದ್ಯಾರ್ಥಿನಿಯರಿಗೂ ಅಭ್ಯಾಸ ಮಾಡಲು ವಿಫುಲ ಅವಕಾಶಗಳಿವೆ’ ಎಂದು ಶಹಾಪುರ ಎಸ್ಡಿಎಂ ಮಹಿಳಾ ಕಾಲೇಜು ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಹೇಳಿದರು.
ನಗರದ ಜನನಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ,‘ಹೆಣ್ಣು ಕಲಿತರೆ ಅವರ ಕುಟುಂಬವೇ ಶಾಲೆಯಾಗಿ ಪರಿವರ್ತನೆಯಾಗುತ್ತದೆ. ಉನ್ನತ ವ್ಯಾಸಂಗ ಮಾಡಿದ ಮಹಿಳೆ ಸರ್ವ ದೃಷ್ಟಿಕೋನದಿಂದಲೂ ಸಬಲಳಾಗುತ್ತಾಳೆ’ ಎಂದು ಪ್ರತಿಪಾದಿಸಿದರು.
ಉಪನ್ಯಾಸಕ ವೆಂಕಟೇಶ ಜಾಲಗಾರ ಮಾತನಾಡಿ, ಜನನಿ ಕಾಲೇಜು ಸತತ 10 ವರ್ಷಗಳಿಂದ ಶೇ100ರಷ್ಟು ಫಲಿತಾಂಶ ಪಡೆಯುತ್ತಿದೆ. ನಮ್ಮಲ್ಲಿ ಅಭ್ಯಾಸ ಮಾಡಿದ ಹಲವು ವಿದ್ಯಾರ್ಥಿನಿಯರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
ಕಾರ್ಯದರ್ಶಿ ಆದಿಶೇಷ ನೀಲಗಾರ ಮಾತನಾಡಿ,‘ಮಹಿಳೆಯರು ಆತ್ಮ ಸ್ಥೈರ್ಯವನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಪಡಿಸಿಕೊಳ್ಳಬೇಕು. ಇದರಿಂದ ಮಹಿಳೆಯರ ಸಬಲೀಕರಣಕ್ಕೆ ನಾಂದಿಯಾಗುತ್ತದೆ’ ಎಂದು ಹೇಳಿದರು.
ಪ್ರಾಂಶುಪಾಲ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಹಣಮಂತ್ರಾಯಗೌಡ, ಬೀರಲಿಂಗ ದೇವತ್ಕಲ್, ಶ್ರೀದೇವಿ ನಾಯಕ, ಜ್ಯೋತಿ, ಶೋಭಾ, ಅಶ್ವಿನಿ, ಶೃತಿಗೌಡ, ರೂಪಾ, ಬಸವರಾಜ ಲೂಟಿ ಭಾಗವಹಿಸಿದ್ದರು.
ಪೂಜಾ ಮತ್ತು ಮೇಘಾ ನಿರೂಪಿಸಿದರು. ಸಬೀನಾ ಸ್ವಾಗತಿಸಿದರು. ಶಾಂತಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.