ADVERTISEMENT

ಸುರಪುರ: ಶಾಲೆಗಳಿಗೆ ನ್ಯಾಯಾಧೀಶರ ಭೇಟಿ

ಪಾಲನೆಯಾಗದ ಕೋವಿಡ್‌ ನಿಯಮಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 16:56 IST
Last Updated 7 ಸೆಪ್ಟೆಂಬರ್ 2021, 16:56 IST
ಸುರಪುರದ ರಂಗಂಪೇಟೆಯ ಪಬ್ಲಿಕ್ ಶಾಲೆಗೆ ನ್ಯಾಯಾಧೀಶ ಚಿದಾನಂದ ಬಡಿಗೇರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು
ಸುರಪುರದ ರಂಗಂಪೇಟೆಯ ಪಬ್ಲಿಕ್ ಶಾಲೆಗೆ ನ್ಯಾಯಾಧೀಶ ಚಿದಾನಂದ ಬಡಿಗೇರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು   

ಸುರಪುರ: ಇಲ್ಲಿನ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸುರಪುರದ ಸರ್ವೋದಯ ಪ್ರೌಢಶಾಲೆಗಳಿಗೆ ನ್ಯಾಯಾಧೀಶ ಚಿದಾನಂದ ಬಡಿಗೇರ ಮಂಗಳವಾರ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿ ಪರಿಶೀಲಿಸಿದರು.

ಕೋವಿಡ್ ಮಾರ್ಗಸೂಚಿ ಪಾಲನೆ ಮತ್ತು ಮೂಲಸೌಕರ್ಯಗಳ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ನಂತರ ಶೌಚಾಲಯ, ಕುಡಿಯುವ ನೀರು, ಪ್ರಯೋಗಾಲಯ, ಕಂಪ್ಯೂಟರ್ ವ್ಯವಸ್ಥೆ ಬಗ್ಗೆ ವೀಕ್ಷಿಸಿದರು.

ತರಗತಿಯ ಕೊಠಡಿಯಲ್ಲಿನ ಸ್ವಚ್ಛತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆ ಕಾಪಾಡಿಕೊಂಡು ಪ್ರತಿ ಕೋಣೆಗೂ ವಿದ್ಯುತ್ ವ್ಯವಸ್ಥೆ ಮಾಡಿ ಕಲಿಕಾ ವಾತಾವರಣ ಹೆಚ್ಚಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ADVERTISEMENT

ಶಾಲಾ ನಿರ್ವಹಣೆಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅವ್ಯವಸ್ಥೆ ಎದುರಾಗಿ ಮುಚ್ಚುವ ಸ್ಥಿತಿಯಲ್ಲಿವೆ. ಅವ್ಯವಸ್ಥೆ ಮತ್ತು ಶಿಕ್ಷಕರ ನಿರ್ಲಕ್ಷ್ಯದಿಂದ ನಮ್ಮ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದಕ್ಕೆಲ್ಲ ಶಿಕ್ಷಕರೆ ಹೊಣೆಗಾರರು. ಪಾಲಕರು ಖಾಸಗಿ ಶಾಲೆಗಳ ಮೊರೆ ಹೋಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಯಾವುದೇ ಸೌಕರ್ಯಗಳಿಲ್ಲ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಮಕ್ಕಳನ್ನು ಅಂತರದಲ್ಲಿ ಕೂಡಿಸಿಲ್ಲ. ಮಕ್ಕಳು ಅದೇಗೆ ಅಭ್ಯಾಸ ಮಾಡಬೇಕು. ವ್ಯವಸ್ಥೆ ಸರಿಪಡಿಸಿಕೊಳ್ಳದಿದ್ದರೆ ಕ್ರಮಕ್ಕೆ ಸೂಚಿಸಲಾಗುವುದು’ ಎಂದರು.

ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆ ಮತ್ತು ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಕಾನೂನು ಸೇವಾ ಸಮಿತಿ ನೀಡಿದ ನಿರ್ದೇಶನದ ಮೇರೆಗೆ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಶಾಲೆಗಳಲ್ಲಿನ ಅವ್ಯವಸ್ಥೆ ನನಗೆ ಬೇಸರ ಮೂಡಿಸಿದ್ದು ಈ ಕುರಿತು ರಾಜ್ಯ ಸಮಿತಿಗೆ ಪರಿಶೀಲನಾ ವರದಿ ಸಲ್ಲಿಸುವುದಾಗಿ ಅವರು ಹೇಳಿದರು. ಬಿಇಒ ಮಹಾದೇವ ರೆಡ್ಡಿ, ಪಿಎಸ್‍ಐ ಕೃಷ್ಣ ಸುಬೇದಾರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.