ವಡಗೇರಾ: ‘ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ವಡಗೇರಾ ತಾಲ್ಲೂಕಿನ ಸಂಗಮೇಶ್ವರ ಮಠದ ಪೀಠಾಧಿಪತಿ ಕರುಣೇಶ್ವರ ಶಿವಾಚಾರ್ಯರು ಆಗ್ರಹಿಸಿದ್ದಾರೆ.
ಅತಿ ಹೆಚ್ಚು ಯುವಕರೇ ಮದ್ಯಪಾನದ ಚಟಕ್ಕೆ ದಾಸರಾಗುತ್ತಿದ್ದಾರೆ. ಕುಡಿತದ ಚಟದಿಂದಾಗಿ ಅನೇಕ ಯುವಕರು ಅಕಾಲಿಕ ಮರಣ ಹೊಂದುತ್ತಿದ್ದಾರೆ ಜತೆಗೆ ಕುಟುಂಬಗಳು ಸಹ ಬೀದಿಪಾಲು ಆಗುತ್ತಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಗುರುವಾರ ಮೂವರು ಯುವಕರು ಕುಡಿದ ನಶೆಯಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿ ಮೃತಪಟ್ಟಿದ್ದಾರೆ. ಈ ಘಟನೆಯು ಮನ ಕುಲುಕುವಂತಾಗಿದೆ. ಕೂಡಲೇ ಸರ್ಕಾರ ಮದ್ಯಪಾನ ನಿಷೇಧಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳ ರೀತಿಯಲ್ಲಿ ಮದ್ಯ ಮಾರಾಟ ನಿಷೇಧ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಾತ್ರ ಮದ್ಯ ಮಾರಾಟ ನಿಷೇಧ ಕುರಿತು ಸದನದಲ್ಲಿ ಚರ್ಚೆ ಮಾಡದಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈಗ ಅಧಿವೇಶನ ಆರಂಭವಾಗಿದ್ದು, ಮದ್ಯ ಮಾರಾಟ ನಿಷೇಧ ಮಾಡುವ ಬಗ್ಗೆ ಜನ ಪ್ರತಿನಿಧಿಗಳು ಚರ್ಚೆ ಮಾಡುಬೇಕು. ಹಾಗೆಯೇ ಮದ್ಯ ಮಾರಾಟ ನಿಷೇಧ ಮಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬೇಕು ಎಂದು ಕರುಣೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.