ಗುರುಮಠಕಲ್: ತಾಲ್ಲೂಕಿನ ಗುಂಜನೂರು ಗ್ರಾಮದ ಗುಂಜಲಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳುವಾಗಿದ್ದ ದೇವಸ್ಥಾನದ ಹುಂಡಿ ಗ್ರಾಮದ ತಿಪ್ಪೆಯೊಂದರಲ್ಲಿ ಮಂಗಳವಾರ ಪತ್ತೆಯಾಗಿದೆ.
₹10.50 ಲಕ್ಷ ನಗದು ಸೇರಿದಂತೆ ಚಿಲ್ಲರೆ ನಾಣ್ಯಗಳು ಹಾಗೂ 130 ಗ್ರಾಂ ಚಿನ್ನವಿದ್ದ ದೇವಸ್ಥಾನ ಹುಂಡಿಯು ಸೋಮವಾರ ರಾತ್ರಿ ಕಳುವಾಗಿತ್ತು. ರಾತ್ರಿ ಮಳೆ ಸುರಿದ ಕಾರಣ ದೇವಸ್ಥಾನದಲ್ಲಿ ಯಾರೂ ಇರದ ಸಮಯದಲ್ಲಿ ಹುಂಡಿ ಕಳವು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಶರಣಗೌಡ ಮಾಲಿಪಾಟೀಲ ಪೊಲೀಸರಿಗೆ ದೂರು ನೀಡಿದ್ದರು.
ಜಾತ್ರೆಯ ನಂತರ ದೇವಸ್ಥಾನದ ಹುಂಡಿಯಲ್ಲಿದ್ದ ₹10.30 ಲಕ್ಷ ಭಕ್ತರ ಕಾಣಿಕೆಯಲ್ಲಿ ದೇವಸ್ಥಾನಕ್ಕೆ ಕಾಂಪೌಂಡ್ ನಿರ್ಮಿಸಲು ಚಿಂತಿಸಲಾಗಿತ್ತು. ಅದರಂತೆ ಹಣವನ್ನು ದೇವಸ್ಥಾನದ ಹುಂಡಿಯಲ್ಲೇ ಬಿಡಲಾಗಿತ್ತು ಮತ್ತು ಹುಂಡಿಯಲ್ಲಿ 130 ಗ್ರಾಂ ಚಿನ್ನಾಭರಣವನ್ನೂ ಇಡಲಾಗಿತ್ತು.
ಕಳವು ದೂರು ದಾಖಲಾಗುತ್ತಿದ್ದಂತೆ ಮಂಗಳವಾರ ಎಸ್ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್ಪಿ ಧರಣೇಶ, ಡಿವೈಎಸ್ಪಿ ಸುರೇಶ ಎಂ, ಪಿಐ ಈರಣ್ಣ ದೊಡ್ಡಮನಿ ಹಾಗೂ ತಂಡ ಪರಿಶೀಲನೆ ನಡೆಸಿತ್ತು. ಪೊಲೀಸ್ ಇಲಾಖೆಯ ಸೋಮನಗೌಡ ಅವರ ನೇತೃತ್ವದಲ್ಲಿ ಶ್ವಾನದಳದ ‘ನಿಷ್ಟಿ’ ಸಹಕಾರದೊಂದಿಗೆ ಹುಂಡಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತು.
ಪೊಲೀಸ್ ಇಲಾಖೆಯ ಎಎಸ್ಐ ಮಹಿಪಾಲರೆಡ್ಡಿ, ಎಎಸ್ಐ ಚಂದ್ರರೆಡ್ಡಿ, ಶರಣು ಪಸಾರ, ವಿಶ್ವನಾಥರೆಡ್ಡಿ, ಶಿವರಾಮರೆಡ್ಡಿ, ರಹೀಮ್, ರಮೇಶರೆಡ್ಡಿ, ಅಶೋಕ, ನರೇಂದ್ರರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.