ಸೈದಾಪುರ: ಸಮೀಪದ ಗೊಂದಡಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು-ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಗೆ ಶಾಂತಮ್ಮ ಭೀಮಣ್ಣ ಎಂಬುವವರ ಮನೆಯ ಎರಡು ಕೋಣೆಗಳ ಮೇಲ್ಚಾವಣಿ ಕುಸಿದುಬಿದ್ದಿವೆ.
ಅಗತ್ಯ ಸಾಮಗ್ರಿಗಳು, ಧವಸ ಧಾನ್ಯಗಳು, ಪಾತ್ರೆಗಳು ಸೇರಿದಂತೆ ಎಲ್ಲವೂ ಮಣ್ಣಿನಡಿಯಲ್ಲಿ ಹೂತಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.
‘ಮನೆಯ ಮುಂಭಾಗದಲ್ಲಿ ಕುಳಿತುಕೊಂಡಾಗ ಇದ್ದಕ್ಕಿದ್ದಂತೆ ಮೇಲ್ಚಾವಣಿ ಕುಸಿದು ಬಿತ್ತು. ಆಗ ಕುಟುಂಬದ ಸದಸ್ಯರೆಲ್ಲರೂ ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡೆವು. ವಾಸಕ್ಕಾಗಿ ಒಂದೇ ಒಂದು ಮನೆ ಇತ್ತು. ಅದು ಕೂಡ ಈಗ ಸಂಪೂರ್ಣವಾಗಿ ಬಿದ್ದಿದೆ. ಜೀವನ ಸಾಗಿಸಲು ಬೇಕಾದ ಜೋಳ, ಅಕ್ಕಿ ಸೇರಿದಂತೆ ಏನೂ ಉಳಿದಿಲ್ಲ. ಎಲ್ಲವೂ ಮಣ್ಣು ಪಾಲಾಗಿವೆ. ಸರ್ಕಾರದಿಂದ ನಮಗೆ ತಕ್ಷಣಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ನೀಡಿ, ಮನೆಯನ್ನು ನಿರ್ಮಿಸಿಕೊಟ್ಟರೆ ತುಂಬಾ ಸಹಾಯವಾಗುತ್ತದೆ’ ಎಂದು ಶಾಂತಮ್ಮ ಗೊಂದಡಗಿ ಅಲವತ್ತುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.