ADVERTISEMENT

ಗುರುಮಠಕಲ್‌ | ಚಿರತೆಯಿರುವುದು ದೃಢ: ಬೋನು ಅಳವಡಿಸಿದ ಅರಣ್ಯ ಇಲಾಖೆ

ಎಂ.ಪಿ.ಚಪೆಟ್ಲಾ
Published 18 ಸೆಪ್ಟೆಂಬರ್ 2025, 5:59 IST
Last Updated 18 ಸೆಪ್ಟೆಂಬರ್ 2025, 5:59 IST
ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಗ್ರಾಮಕ್ಕೆ ಬುಧವಾರ ಬೇಟಿ ನೀಡಿ, ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ ಆರ್.ಎಫ್‌.ಒ. ಮತ್ತು ತಂಡ.
ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಗ್ರಾಮಕ್ಕೆ ಬುಧವಾರ ಬೇಟಿ ನೀಡಿ, ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ ಆರ್.ಎಫ್‌.ಒ. ಮತ್ತು ತಂಡ.   

ಗುರುಮಠಕಲ್‌: ತಾಲ್ಲೂಕಿನ ಎಂ.ಟಿ. ಪಲ್ಲಿ ಗ್ರಾಮಕ್ಕೆ ಬುಧವಾರ ಆರ್‌ಎಫ್‌ಒ ಬುರಾನುದ್ದೀನ್‌, ಎಆರ್‌ಎಫ್‌ಒ ಸಂಗಮೇಶ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಭೇಟಿ ನೀಡಿ, ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದ್ದು, ಚಿರತೆ ಮಾತ್ರವಲ್ಲದೆ ಹುಲಿ ಇರುವುದೂ ಖಚಿತವಾಗಿದೆ.

ಕಳೆದ ಹದಿನೈದು ದಿನಗಳಿಂದ ಅಲ್ಲಲ್ಲಿ ಚಿರತೆ ಮತ್ತು ಹುಲಿ ಇರುವುದನ್ನು ಕಂಡ ಗ್ರಾಮಸ್ಥರು ಭೀತಿಯಲ್ಲೇ ಕೃಷಿ ಚಟುವಟಿಕೆಗಳು ನಡೆಸುತ್ತಿದ್ದರು. ಸೋಮವಾರ (ಸೆ.15) ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡಿತ್ತು. ಮಂಗಳವಾರ (ಸೆ.16) ಸಂಜೆ ಗ್ರಾಮದ ಹೊರವಲಯದ ಪೊದೆಗಳಲ್ಲಿ ಚಿರತೆ ಕಂಡಿದೆ. ಇದರಿಂದ ಗ್ರಾಮದಲ್ಲಿ ಭಯದ ನೆರಳು ಕವಿದಿದೆ.

ಸಹಾಯವಾಣಿಗೆ ಸಂಪರ್ಕಿಸಿ: ಗ್ರಾಮಗಳಲ್ಲಿ ಚಿರತೆ ಸಂಚರಿಸುವುದು ಕಂಡುಬಂದರೆ ಅರಣ್ಯ ಇಲಾಖೆಯ ಸಹಾಯವಾಣಿ (ಮೊ.9481993303) ಗೆ ಸಂಪರ್ಕಿಸಿ. ಮಾಹಿತಿ ನೀಡಿ ಇಲಾಖೆಗೆ ಸಹಕರಿಸುವಂತೆ ಆರ್‌ಎಫ್‌ಒ ಬುರಾನೋದ್ದೀನ್‌ ತಿಳಿಸಿದ್ದಾರೆ.

ADVERTISEMENT

ಚಿರತೆ ಕಂಡ ಗ್ರಾಮಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಕತ್ತಲಿರುವ ವೇಳೆ ಒಬ್ಬಂಟಿಯಾಗಿ ಸಂಚರಿಸುವುದು, ಜಾನುವಾರುಗಳನ್ನು ಮೇಯಿಸುವಾಗ ಪೊದೆಗಳ ಹತ್ತಿರ ನಿಲ್ಲುವುದು, ದನಗಳ ಮೇಲೆ ದಾಳಿ ಮಾಡಿದಾಗ ಅಡ್ಡಿಪಡಿಸುವ, ಅನವಶ್ಯಕ ಗದ್ದಲ, ಸಿಡಿಮದ್ದು ಬಳಕೆ ಮಾಡದಿರಿ ಎಂದು ಸಲಹೆ ನೀಡಿದರು.

ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಬುಧವಾರ ಪರಿಶೀಲನೆ ವೇಳೆ ಕಂಡ ಚಿರತೆಯ ಹೆಜ್ಜೆ ಗುರುತು.
ಎಂ.ಟಿ. ಪಲ್ಲಿಯಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡಿವೆ. ಬೋನು ಅಳವಡಿಸಲಾಗಿದೆ. ಹುಲಿಯಿರುವ ಕುರಿತು ಪರಿಶೀಲನೆ ಮಾಡುತ್ತೇವೆ. ಪಂಚಾಯಿತಿ ಸಹಕಾರದಲ್ಲಿ ಜಾಗೃತಿ ಮೂಡಿಸಲಾಗುವುದು.
ಬುರಾನೋದ್ದೀನ್‌ ಆರ್.ಎಫ್.ಒ.
ಸೋಮವಾರ ದನಗಳನ್ನು ಮೇಯಿಸುತ್ತ ಸ್ವಲ್ಪ ದೂರ ನಿಂತಿದ್ದೆ. ನಮ್ಮ ಎತ್ತು ಮತ್ತು ಕರುಗಳ ಮೇಲೆ ದಾಳಿ ನಡೆಸಿದ ವೇಳೆ ಜತೆಯಲ್ಲಿದ್ದವರನ್ನು ಕೂಗಿದೆ. ನಮ್ಮ ಗದ್ದಲ ಕೇಳಿ ಹಿಂದಿರುಗಿತು. ಅದೃಷ್ಟಕ್ಕೆ ಯಾವ ಅಪಾಯವೂ ಆಗಲಿಲ್ಲ.
ನಾಗೇಂದ್ರ ಕೊಲ್ಲೂರು ಎತ್ತು ಮೇಯಿಸುತ್ತಿದ್ದ ಯುವಕ
ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಬುಧವಾರ ಪರಿಶೀಲನೆ ವೇಳೆ ಕಂಡ ಚಿರತೆಯ ಹೆಜ್ಜೆ ಗುರುತು.
ಹುಲಿಯೂ ಇರುವ ಶಂಕೆ
ಬುಧವಾರ (ಸೆ.18) ಬೆಳಿಗ್ಗೆ ಎಂ.ಟಿ. ಪಲ್ಲಿ ಗ್ರಾಮದ ಯುವಕ ಅಂಜಪ್ಪ ತಂಗಾ ಅವರು ತಮ್ಮ ಹೊಲದ ಪಕ್ಕದಲ್ಲಿ ಸಿತಾಫಲ ಕಾಯಿಯನ್ನು ತರಲು ತೆರಳಿದ್ದರು. ಆಗ ಹಸಿರಿನ ನಡುವೆ ಹಾದು ಹೋಗುತ್ತಿದ್ದ ಹುಲಿಯ ಫೋಟೊವನ್ನು ಸೆರೆಹಿಡಿದಿದ್ದಾರೆ. ‘ಸೀತಾಫಲ ತರಲು ಹೋದಾಗ ಹುಲಿ ಕಂಡಿತು. ನಾನು ಇದ್ದಲ್ಲಿಂದಲೇ ಓಡುತ್ತಾ ಕೂಡಲೇ ಮೊಬೈಲ್‌ನಲ್ಲಿ ಜೂಮ್‌ ಮಾಡಿ ಫೋಟೋ ತೆಗೆದಿದ್ದೇನೆ. ಅದರ ಮೈಮೇಲೆ ಉದ್ದುದ್ದ ಪಟ್ಟಿಗಳಿದ್ದವು’ ಎಂದು ಅಂಜಪ್ಪ ತಂಗಾ ‘ಪ್ರಜಾವಾಣಿ’ಗೆ ತಿಳಿಸಿದರು.
ಹುಲಿ ಇದೇ ಮೊದಲು
ನಾಲ್ಕೈದು ವರ್ಷಗಳಿಂದ ತಾಲ್ಲೂಕಿನ ವಿವಿಧೆಡೆ ಚಿರತೆ ಕಂಡಿತ್ತು. ಜಾನುವಾರು ನಾಯಿಗಳನ್ನೂ ಹಿಡಿದುಕೊಂಡು ಹೋಗಿತ್ತು. ಮಿನಾಸಪುರದಲ್ಲಿ ಮೀನುಗಾರರ ಮೇಲೆ ಸಹ ದಾಳಿ ಮಾಡಿತ್ತು. ಆದರೆ ನಮ್ಮ ಭಾಗದಲ್ಲಿ ಹುಲಿ ಕಂಡಿರಲಿಲ್ಲ. ಇದೇ ಮೊದಲ ಬಾರಿಗೆ ಹುಲಿ ಕಂಡಿದೆ ಎಂದು ಸ್ಥಳೀಯರು ಹೇಳಿದರು. ‘ನಮ್ಮ ಭಾಗದಲ್ಲಿ ಹಿಂದಿನಷ್ಟು ದಟ್ಟ ಕಾಡಿಲ್ಲ. ನಮ್ಮ ಚಿಕ್ಕಂದಿನಲ್ಲಿ ಹುಲಿಗಳಿದ್ದವು. ಆದರೆ ಈಗ ನಮ್ಮಲ್ಲಿ ಹುಲಿ ಬದುಕಬಹುದಾದ ಅರಣ್ಯವಿಲ್ಲ. ಆದ್ದರಿಂದ ಹುಲಿಗಳು ಅಳಿದು ಹೋಗಿವೆ ಎಂದು ಭಾವಿಸಿದ್ದೆವು’ ಎಂದು ಹಿರಿಯ ನಾಗರಿಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.