ಯಾದಗಿರಿ: ನಗರದಲ್ಲಿ ಸೋಮವಾರ ವ್ಯಾಪಾರ ವಹಿವಾಟು ನಡೆಯಿತು. ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಜನತಾ ಕರ್ಫ್ಯೂ ವಿಧಿಸಿಕೊಂಡ ಜನತೆ ಸೋಮವಾರ ಯಥಾರೀತಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.
ಭಾನುವಾರ ಭಣಗುಡುತ್ತಿದ್ದ ರಸ್ತೆ, ಬಡಾವಣೆಗಳು ಸೋಮವಾರ ಯಥಾ ರೀತಿ ಎಲ್ಲೆಡೆ ವಾಹನ ಓಡಾಟ ಸಾಮಾನ್ಯವಾಗಿತ್ತು.
ಬೇಕರಿಗಳು ಬಂದ್:ನಗರದಲ್ಲಿ ಎಲ್ಲೆಡೆ ಬೇಕರಿಗಳು ಬಂದ್ ಆಗಿವೆ. ಮಕ್ಕಳು ಬೇಕರಿ ಪದಾರ್ಥಗಳಿಗೆ ಬೇಡಿಕೆ ಇಡುವುದು ಕಂಡು ಬಂದಿತು.
ಬಸ್ ಬಂದ್: ನಗರದ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅಲ್ಲೊಬ್ಬರು ಇಲ್ಲೊಬ್ಬರು ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಸ್ ನಿಲ್ದಾಣದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಉದ್ಯೋಗದಲ್ಲಿ ಇರುವವರು ಬೇರೆ ಪ್ರದೇಶಕ್ಕೆ ತೆರಳಲು ಖಾಸಗಿ ವಾಹನಗಳತ್ತ ಮುಖ ಮಾಡಿದರು.
ಕೆಲವೆಡೆ ಹೋಟೆಲ್ ಬಂದ್ ಆಗಿದ್ದರಿಂದ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನುಳಿದಂತೆ ಆಸ್ಪತ್ರೆ, ಮೆಡಿಕಲ್ ತೆಗೆದಿವೆ.
ಬೆಳಿಗ್ಗೆಯಿಂದ ಫರ್ನಿಚರ್, ಬಣ್ಣದ ಅಂಗಡಿಗಳು ತೆಗೆದಿದ್ದವು. ಸಂಜೆಯಾಗುತ್ತಲೇ ಬಂದ್ ಮಾಡಿದರು. ಇನ್ನು ಕಿರಾಣಿ ಅಂಗಡಿಗಳಲ್ಲಿ ವ್ಯಾಪಾರ ಎಂದಿನಂತೆ ಇತ್ತು.
ಯುಗಾದಿ ಖರೀದಿ:ನಗರದ ಸುಭಾಷ ವೃತ್ತದ ಬಳಿ ಯುಗಾದಿ ಹಬ್ಬಕ್ಕಾಗಿ ವಿವಿಧ ಸಿಹಿ ಪದಾರ್ಥಗಳನ್ನು ಮಾರಾಟ ಮಾಡುವುದು ಸೋಮವಾರ ಕಂಡು ಬಂತು. ₹20ರಿಂದ ₹100 ಪೊಟ್ಟಣ, ಬಿಡಿಬಿಡಿಯಾಗಿ ಸಿಹಿ ಪದಾರ್ಥ ಮಾರಾಟ ಮಾಡಲಾಗುತ್ತಿತ್ತು.
ಬಟ್ಟೆ ಖರೀದಿಯೂ ಜೋರು:ನಗರದ ವಿವಿಧ ಅಂಗಡಿಗಳಲ್ಲಿ ಬಟ್ಟೆ ವ್ಯಾಪಾರ ಜೋರಾಗಿ ನಡೆಯಿತು. ಭಾನುವಾರ ಬಂದ್ ಆಗಿದ್ದರಿಂದ ಸೋಮವಾರ ಅಂಗಡಿಗಳು ತೆಗೆದಿದ್ದರಿಂದ ಗ್ರಾಮೀಣ ಪ್ರದೇಶದಿಂದ ಬಂದ ರೈತರು ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ಹಣ್ಣುಗಳ ಖರೀದಿಯೂ ಕಂಡು ಬಂತು. ಮನೆ ಕಟ್ಟುವ ಕಾರ್ಮಿಕರು ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.