
ಯಾದಗಿರಿ: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾಲ್ಲೂಕು ಕೇಂದ್ರವಾದ ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜಗೆ ಏರಿಸಲಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ತಿಳಿಸಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ವಡಗೇರಾದ ಜನರು ಸಂಭ್ರಮಿಸಿದರು.
ಕ್ಷೇತ್ರ ವ್ಯಾಪ್ತಿಯ ದೋರನಹಳ್ಳಿ ಹಾಗೂ ವಡಗೇರಾ ಒಂದೇ ತಿಂಗಳಲ್ಲಿ ಪಟ್ಟಣ ಪಂಚಾಯಿತಿ ಸ್ಥಾನ ಪಡೆದುಕೊಂಡಿವೆ. ಪಟ್ಟಣ ಪಂಚಾಯಿತಿ ಮಾಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಸರ್ಕಾರದಿಂದ ಮನ್ನಣೆ ಸಿಕ್ಕಿದೆ. ಶಾಸಕ ಚನ್ನಾರೆಡ್ಡಿ ಪಾಟೀಲ ಅವರ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಸಂಭ್ರಮಿಸಿದರು. ಪಟಾಕಿಯೂ ಸಿಡಿಸಿ, ಪರಸ್ಪರ ಸಿಹಿ ತಿನಿಸಿದರು.
‘ಬಹುವರ್ಷಗಳ ಬೇಡಿಕೆ ಈಡೇರಿದೆ. ಅಧಿಕಾರಿಗಳ ಸಹಾಯದಿಂದ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನಿರಂತರ ಪ್ರಯತ್ನ ಮಾಡಲಾಗಿತ್ತು. ನಮ್ಮ ಮನವಿಯನ್ನು ಮುಖ್ಯಮಂತ್ರಿಗಳು ಪರಿಗಣಿಸಿ ಒಂದೇ ತಿಂಗಳಲ್ಲಿ ಎರಡು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಶಾಸಕರು ಹೇಳಿದರು.
‘ಎರಡ್ಮೂರು ವಾರಗಳ ಹಿಂದೆ ದೋರನಹಳ್ಳಿ ಪ.ಪಂ. ಆಗಿ ಮೇಲ್ದರ್ಜೆಗೆ ಏರಿಸಿದಾಗಲೇ ವಡಗೇರಾ ಕೂಡಾ ಆಗಬೇಕಿತ್ತು. ತಾಂತ್ರಿಕ ಕಾರಣಗಳಿಂದ ಸ್ವಲ್ಪ ಮುಂದೆ ಹೋಗಿತ್ತು. ಅಧಿಕಾರಿಗಳ ಸಹಾಯದಿಂದ ಅದನ್ನು ಸರಿಪಡಿಸಿ ಈಗ ಕಾರ್ಯರೂಪಕ್ಕೆ ಬಂದಿದೆ’ ಎಂದರು.
ಸಂಭ್ರಮ ಆಚರಣೆಯಲ್ಲಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳ್ಹಾರ್, ಪ್ರಮುಖರಾದ ಘಾಳೆಪ್ಪ ಪೂಜಾರಿ, ಶರಣು ಪಡಶೆಟ್ಟಿ, ಮೈನೊದ್ದೀನ್ ಮಿರ್ಚಿ, ಮೈನೊದ್ದೀನ್ ದೇವದುರ್ಗಾ, ಭಾಷಮಿಯ ನಾಯಕೋಡಿ, ಶರಣು ಇಟಗಿ, ಮಲ್ಲು ಶಿವಪುರ, ಗುರುನಾಟೇಕರ್, ಶರಣು ಕುರಿ, ಯಂಕಪ್ಪ ರಾಠೋಡ್, ಬಸಣ್ಣ ಜಡಿ, ಬಸವರಾಜ ಚವ್ಹಾಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.