ಶಹಾಪುರ: ಪ್ರಸಕ್ತ ಮುಂಗಾರು ಹಾಗೂ ಹಿಂಗಾರು ವಿಫಲವಾಗಿ ಬರದ ಬವಣೆಯನ್ನು ಎದುರಿಸುತ್ತಿರುವ ಈ ಭಾಗದ ರೈತರಿಗೆ ಬಿಳಿಜೋಳ ತುಸು ನೆಮ್ಮದಿ ಮೂಡಿಸಿದೆ. ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ್ದ ಬಿಳಿಜೋಳ ಈಗ ತೆನೆ ಕಟ್ಟುವ ಹಂತದಲ್ಲಿದೆ.
ನವೆಂಬರ್ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಕಾಲುವೆ ನೀರು ಸ್ಥಗಿತಗೊಳಿಸಲಾಗಿತು. ಆಗಲೇ ಬಿಳಿಜೋಳ ಒಂದು ತಿಂಗಳದ ಬೆಳೆ ಇತ್ತು. ನೀರಿನ ತೇವಾಂಶದ ಕೊರತೆಯಿಂದ ಬೆಳೆ ಬಾಡಲಾರಂಭಿಸಿತು. ನಂತರ ಕೆಲಕಾಲ ಕಾಲುವೆ ನೀರನ್ನು ಹರಿಸಿದಾಗ ಇಡೀ ಬೆಳೆಯ ಚಿತ್ರಣವೇ ಬದಲಾಗಿ ಹೋಗಿದೆ.
ಸದ್ಯ ತೆನೆ ಕಟ್ಟುವ ಹಂತದಲ್ಲಿರುವ ಬೆಳೆಗೆ ಕೆಲ ದಿನಗಳಿಂದ ಬೀಸುತ್ತಿರುವ ತಂಗಾಳಿ ಹೆಚ್ಚು ಅನುಕೂಲವಾಗಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ವೆಂಕಟೇಶ ಹವಾಲ್ದಾರ್.
ಉತ್ತರ ಕರ್ನಾಟಕದಲ್ಲಿ ಬಿಳಿಜೋಳ ಪ್ರಮುಖ ಆಹಾರವಾಗಿದೆ. ರೈತರು ಹೆಚ್ಚಾಗಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಯುತ್ತಾರೆ. ಪ್ರಸಕ್ತ ಬಾರಿ ಜೋಳಕ್ಕೂ ಹೆಚ್ಚಿನ ಬೇಡಿಕೆ ಆಗಲಿದೆ ಎನ್ನತ್ತಾರೆ ರೈತ ನಿಂಗಣ್ಣ ಗೋಪಾಳಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.