ಯಾದಗಿರಿ: ಸುರಪುರ ತಾಲ್ಲೂಕಿನಲ್ಲಿ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಿದ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಜಾಥಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಕುಳಿತು ಮುಖ್ಯ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು. ಈ ಕೃತ್ಯಕ್ಕೆ ಸಹಕಾರ ನೀಡಿದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಸುರಪುರ ತಾಲ್ಲೂಕಿನ ಕರ್ನಾಳ, ಹೆಮ್ಮಡಗಿ, ಕುಪ್ಪಗಲ್, ಬೇವಿನಾಳ, ಹೇಮನೂರ, ಚಂದ್ಲಾಪುರ, ಚೌಡೇಶ್ವರಿಹಾಳ ಇಂಥ ಗ್ರಾಮಗಳಲ್ಲಿ ಹಲವಾರು ಬಾರಿ ಮಹಿಳೆಯರಿಗೆ, ಯುವಕರಿಗೆ ದೌರ್ಜನ್ಯ, ದಬ್ಬಾಳಿಕೆ, ಗೂಂಡಾಗಿರಿ, ಅತ್ಯಾಚಾರ, ಲೈಂಗಿಕ ಪ್ರಕರಣಗಳು ಜರುಗಿದ್ದು, ಈಗಾಗಲೇ ಜಿಲ್ಲಾಡಳಿತ ಗಮನಕ್ಕೆ ಬಂದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಬೇಜಬ್ದಾರಿ ಮೆರೆಯುತ್ತಿದೆ ಎಂದು ಆರೋಪಿಸಿದರು.
ಕೊಲೆಯಾದ ಮಹಿಳೆ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು, ಒಂದು ಕೋಟಿ ರೂಪಾಯಿ ಪರಿಹಾರ ಹಣ, ಕುಟುಂಬಕ್ಕೆ 4 ಎಕರೆ ಜಮೀನು ಮಂಜೂರು ಮಾಡಬೇಕು, ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ, ನಿರಂತರವಾಗಿ ಮಾದಿಗ ಸಮುದಾಯದವರು ವಾಸವಾಗಿರುವ ಸ್ಥಳದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದೇವಿಂದ್ರನಾಥ ಕೆ ನಾದ, ಲಿಂಗಪ್ಪ ಹತ್ತಿಮನಿ, ಚೆನ್ನಯ್ಯ ಮಾಳಿಕೇರಿ, ಶಿವು ಮುದ್ನಾಳ, ಮಲ್ಲಣ್ಣ ದಾಸನಕೇರಿ, ಖಂಡಪ್ಪ ದಾಸನ್, ಶಾಂತರಾಜ ಮೊಟ್ನಳ್ಳಿ, ನಿಂಗಪ್ಪ ವಡ್ನಳ್ಳಿ, ಗೋಪಾಲ ದಾಸನಕೇರಿ, ಸ್ಯಾಂಸನ್ ಮಾಳಿಕೇರಿ, ಸ್ವಾಮಿದೇವ ದಾಸನಕೇರಿ, ಅಂಜನೇಯ ಬಬಲಾದ, ಹಣಮಂತ ಇಟಗಿ, ಎಂ.ಕೆ. ಬೀರನೂರು, ಕೆ.ಬಿ.ವಾಸು, ಮಂಜುನಾಥ ದಾಸನಕೇರಿ, ಮಲ್ಲಿಕಾರ್ಜುನ ಜಲ್ಲಪ್ಪನೋರ, ಶಾಂತಪ್ಪ ಖಾನಳ್ಳಿ, ಸೈದಪ್ಪ ಕೊನಳ್ಳಿ, ತಿಪ್ಪಣ್ಣ ಕೊನಿಮನಿ, ಭೀಮಾಶಂಕರ ಆಲ್ದಾಳ, ಹಣಮಂತ ಸೌರಷ್ಟ್ರಹಳ್ಳಿ, ಸಾಬಣ್ಣ ಸೈದಾಪುರ, ಹಣಮಂತ ಲಿಂಗೇರಿ, ವಾಬಣ್ಣ ಕಡೇಚೂರು, ಕಾಶಪ್ಪ ಸೈದಾಪುರ, ಸುರೇಶ ಹಾಲಗೇರ ಇದ್ದರು.
ಕಠಿಣ ಶಿಕ್ಷೆಗೆ ದಂಡೋರ ಆಗ್ರಹ
ಯಾದಗಿರಿ: ಸುರಪುರ ತಾಲ್ಲೂಕಿನ ಗ್ರಾಮವೊಂದರ ವಿವಾಹಿತ ಮಹಿಳೆಯನ್ನು ಪೆಟ್ರೋಲ್ನಿಂದ ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಾದಿಗ ದಂಡೋರಾ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸುಭಾಷ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ದಾಸನಕೇರಿ, ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ಪದೇ ಪದೇ ಅತ್ಯಾಚಾರ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ದಲಿತರ ಮೇಲೆ ಹಲ್ಲೆ ಅತ್ಯಾಚಾರ ಘಟನೆಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಬಸವರಾಜ ಮೇತ್ರಿ ನಾಯ್ಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ರಾಯಚೂರಕರ್, ತಾಲ್ಲೂಕಾಧ್ಯಕ್ಷ ಜಗದೀಶ ದಾಸನಕೇರಿ, ಕಾಶಪ್ಪ ಹೆಗ್ಗಣಗೇರಾ, ಹಣಮಂತ ಮ್ಯಾಗೇರಿ, ಮಲ್ಲು ಖಾನಾಪುರ, ಖಂಡಪ್ಪ ಶಹಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.