ಶಹಾಪುರ: ಗ್ರಾಮೀಣ ಹಾಗೂ ನಗರ ಪ್ರದೇಶಗಳು ಸರ್ವಾಂಗಿಣವಾಗಿ ವಿಕಾಸವಾಗಲು ಮಹಿಳೆಯರಿಗೆ ಕೌಶಲಾಭಿವೃದ್ಧಿ ಯೋಜನೆ ಅಡಿಹೊಲಿಗೆ ಕೇಂದ್ರಗಳು ಮಹತ್ವದ್ದಾಗಿವೆ. ಇದರಿಂದ ಕಾಯಕ ಸಂಸ್ಕೃತಿ ಅನುಕೂಲವಾಗುತ್ತದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘದಿಂದ ಹಮ್ಮಿಕೊಂಡಿದ್ದ ಹೊಲಿಗೆ ಕೇಂದ್ರಗಳ ಸಾಮಗ್ರಿ ವಿತರಣೆ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಯೋಜನೆಗಳು ಸರ್ವರಿಗೂ ತಲುಪಿಸುವ ಸೇವಾಭಾವನೆಯಿಂದ ಕಾರ್ಯನಿರ್ವಹಿಸಿದಾಗ ಅದಕ್ಕೆ ಸಾರ್ಥಕತೆ ಬರುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯಿಕ ಚಟುವಟಿಕೆ ಹೆಚ್ಚಾಗಬೇಕು. ಮಹಿಳಾ ಶಕ್ತಿ ಉತ್ತಮವಾದ ಅವಕಾಶಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಸಂಘದ ಜಿಲ್ಲಾ ನಿರ್ದೇಶಕ ನೀಲಕಂಠರಾಯ ಯಲ್ಹೇರಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರದಿಂದ ಹೊಸ ಅವಕಾಶಗಳು ದೊರಕಿದ್ದು, ವಿವಿಧ ಯೋಜನೆಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿ ಹೊಲಿಗೆ ಕೇಂದ್ರಗಳು ಶಕ್ತಿಯುತವಾಗಿ ಬೆಳೆದು ಅಭಿವೃದ್ಧಿಗೆ ನಾಂದಿಯಾಗಲಿ ಎಂದರು.
ಫಕೀರೇಶ್ವರ ಮಠದ ಗುರು ಪಾದೇಶ್ವರ ಸ್ವಾಮೀಜಿ, ದೇವಿಂದ್ರಪ್ಪ ಗೋನಾಲ, ಮಲ್ಲಿಕಾರ್ಜುನ ಉಳ್ಳಿ, ವಿಶ್ವನಾಥರೆಡ್ಡಿ ಪಾಟೀಲ, ಅಮೃತರಾವ ಮುಲಗೆ, ಗುರುಬಸ್ಸಯ್ಯ ಗದ್ದುಗೆ, ಸುಧಾಕರ ಗುಡಿ, ನರಸಿಂಹ ವೈದ್ಯ, ಭೀಮರೆಡ್ಡಿ ಬೈರೆಡ್ಡಿ, ಶರಣು ಪಾಟೀಲ, ರವಿಚಂದ್ರ ಚಟ್ನಳ್ಳಿ, ಶಾಮಲಾ, ಶ್ರೀದೇವಿ, ನಿಂಗಣ್ಣ ತೇಕರಾಳ, ಶಾಲೆಯ ಮುಖ್ಯಶಿಕ್ಷಕ ವಿರೇಶ ಉಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.