
ಸುರಪುರ: ‘ಶಿಕ್ಷಣ ಈಗ ವ್ಯಾಪಾರೀಕರಣವಾಗಿದೆ. ಅನ್ಯ ಭಾಷೆಯ ವ್ಯಾಮೋಹ ಅಧಿಕವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸದೆ ವಂಚನೆ ಮಾಡುತ್ತಿದ್ದಾರೆ’ ಎಂದು ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
ತಾಲ್ಲೂಕಿನ ರುಕ್ಮಾಪುರದ ಭೀಮಬಾಯಿ ನಾರಾಯಣಪ್ಪ ಭಂಡಾರೆ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಇದರಿಂದ ಮಕ್ಕಳು ಸಂಸ್ಕಾರ ಕಳೆದುಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಯ ಸಂವಹನ ಕೈತಪ್ಪುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಕನ್ನಡ ಮಾಧ್ಯಮ ಶಾಲೆಗಳು ಮಾದರಿಯಾಗುತ್ತವೆ’ ಎಂದರು.
ಪ್ರಭು ಕಾಲೇಜಿನ ಪ್ರಾಚಾರ್ಯ ಎಚ್. ವಿರುಪಾಕ್ಷನಾಯಕ ಮಾತನಾಡಿ, ‘ಕಾರ್ಯಕ್ರಮದಲ್ಲಿ ಮಕ್ಕಳಿಂದ ತಂದೆ ತಾಯಿಗಳಿಗೆ, ಪೂಜ್ಯರಿಗೆ, ಶಿಕ್ಷಕರಿಗೆ ಪಾದಪೂಜೆ ಮಾಡಿಸಿದ್ದು ಪ್ರಶಂಸನಾರ್ಹ. ಇದು ಹಿರಿಯರ ಮೇಲೆ ಮಕ್ಕಳಿಗೆ ಗೌರವ ಬೆಳೆಸುವ ಸಂಪ್ರದಾಯ’ ಎಂದರು.
ಗುರುಶಾಂತಮೂರ್ತಿ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನಿಡಿದರು. ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಅಶ್ವಿನಿ ಪಾಟೀಲ, ಈರಪ್ಪ ಸಿಂಪಿ, ನಾಗೇಂದ್ರ ಬಣಗಾರ, ಶಿಕ್ಷಕರಾದ ಶಂಕ್ರಮ್ಮ, ಗಿರಿಜಾಬಾಯಿ, ವೀಣಾ, ಮಹಾದೇವಿ ಉಪಸ್ಥಿತರಿದ್ದರು.
ಸಂಗಣ್ಣ ಶಿರಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾವತಿ ಬಡಗಾ ಸ್ವಾಗತಿಸಿದರು. ಅರುಣಾಕುಮಾರಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶಶಿಕಲಾ ತಮ್ಮಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.