ADVERTISEMENT

ಯಾದಗಿರಿ: ಆಹಾರ ಧಾನ್ಯ ಕಿಟ್‌ಗಾಗಿ ಮುಗಿಬಿದ್ದ ಕಾರ್ಮಿಕರು

ಕೋವಿಡ್‌ ನಿಯಮ ಉಲ್ಲಂಘನೆ; ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 8:33 IST
Last Updated 15 ಜುಲೈ 2021, 8:33 IST
ಯಾದಗಿರಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಕಟ್ಟಡ ಕಾರ್ಮಿಕರು ಆಹಾರ ಧಾನ್ಯ ಕಿಟ್‌ ‍ಪಡೆಯಲು ಮುಗಿಬಿದ್ದಿದ್ದರು
ಯಾದಗಿರಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಕಟ್ಟಡ ಕಾರ್ಮಿಕರು ಆಹಾರ ಧಾನ್ಯ ಕಿಟ್‌ ‍ಪಡೆಯಲು ಮುಗಿಬಿದ್ದಿದ್ದರು   

ಯಾದಗಿರಿ: ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸುತ್ತಿರುವ ಆಹಾರ ಧಾನ್ಯ ಕಿಟ್‌ ಪಡೆಯಲು ಜನತೆ ಮುಗಿಬಿದ್ದಿದ್ದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಬೆಳಿಗ್ಗೆಯಿಂದ ಜನರು ಸರದಿಯಲ್ಲಿ ನಿಂತುಕೊಂಡಿದ್ದರು.

ಪುರುಷ, ಮಹಿಳೆಯರಿಗೆ ಪ್ರತ್ಯೇಕ ಸಾಲು ಮಾಡಿದ್ದರೂ ಜನರು ಹೆಚ್ಚಾಗಿರುವ ಕಾರಣ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ ಪೊಲೀಸರೊಬ್ಬರು ಮಹಿಳೆಯನ್ನು ತಳ್ಳಿರುವುದು ಕಂಡು ಬಂದಿದೆ.

ADVERTISEMENT

ಆಹಾರ ಧಾನ್ಯ ಕಿಟ್ ಪಡೆಯಲು ಕಾರ್ಮಿಕರು ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಮಾಸ್ಕ್ ಧರಿಸಿಲ್ಲ, ಅಂತರವೂ ಕಾಪಾಡಿಕೊಂಡಿಲ್ಲ.

ಆಹಾರ ಧಾನ್ಯ ಕಿಟ್ ನೀಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಜನರು ಕೆಲಸ ಬಿಟ್ಟು ಸರದಿಯಲ್ಲಿ ನಿಂತು ಕಾಯುತ್ತಿದ್ದರು. ಬುಧವಾರ ಬೆಳಿಗ್ಗೆ ತುಂತುರು ಮಳೆಯಾಗಿದ್ದು, ಅದರಲ್ಲಿಯೇ ಕಾರ್ಮಿಕರು ನಿಂತಿದ್ದರು.

‘ಕೋವಿಡ್‌ ನಿಯಮ ಪಾಲಿಸಲು ಕಾರ್ಮಿಕರಿಗೆ ತಿಳಿವಳಿಕೆ ಮೂಡಿಸಲಾಗಿದೆ. ಹಲವಾರು ಕಾರ್ಮಿಕರು ಒಮ್ಮೆಲೆ ಬಂದಿದ್ದರಿಂದ ಸಮಸ್ಯೆಯಾಗಿದೆ. ಕಾರ್ಮಿಕ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ ಪಡೆದು ಕಿಟ್‌ ವಿತರಿಸಲಾಗುತ್ತಿದೆ. ಹೀಗಾಗಿ ವಿಳಂಬ ಆಗುತ್ತಿದೆ. ಅಲ್ಲದೇ ಬುಧವಾರ 300ಕ್ಕೂ ಹೆಚ್ಚು ಕಾರ್ಮಿಕರಿಗೆ ಇದೇ ಸಮಯ ಬಳಸಿಕೊಂಡು ಕೋವಿಡ್‌ ಲಸಿಕೆ ಹಾಕಿಸಲಾಗಿದೆ’ ಎಂದುಯಾದಗಿರಿ ವಿಭಾಗ ಕಾರ್ಮಿಕ ಅಧಿಕಾರಿಶ್ವೇತಾ ಸಂಗಂ ಹೇಳುತ್ತಾರೆ.

3 ಸಾವಿರ ಜನರಿಗೆ ಕಿಟ್‌: ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್‌ ಅವರು ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ ಮಂಗಳವಾರ ಕಿಟ್‌ ವಿತರಣೆಗೆ ಚಾಲನೆ ನೀಡಿದ್ದರು. ಬುಧವಾರದಿಂದ ಯಾದಗಿರಿಯಲ್ಲಿ ವಿತರಿಸಲಾಗುತ್ತಿದೆ.

ಮಂಗಳವಾರ 1,460, ಬುಧವಾರ 2,388 ಜನರಿಗೆ ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ 3,848 ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಿಲಾಗಿದೆ.

ಕಿಟ್‌ನಲ್ಲಿ ಏನೆನಿದೆ?: ಕಾರ್ಮಿಕ ಇಲಾಖೆಯಿಂದ ನೀಡಿರುವ ಆಹಾರ ಧಾನ್ಯ ಕಿಟ್‌ನಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಕೆಜಿ ರವೆ, 2 ಕೆಜಿ ಗೋಧಿ ಹಿಟ್ಟು, 1 ಕೆಜಿ ಅವಲಕ್ಕಿ, 1 ಲೀಟರ್‌ ಎಣ್ಣೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 200 ಗ್ರಾಂನ ಖಾರ, ಸಾಂಬರ್‌ ಪುಡಿ ಒಳಗೊಂಡಿದೆ.

***

ಕಟ್ಟಡ ಕಾರ್ಮಿಕರಿಗಾಗಿ ಯಾದಗಿರಿಗೆ 10 ಸಾವಿರ ಕಿಟ್‌ ಬಂದಿವೆ. ಕಿಟ್‌ ನೀಡುವ ವೇಳೆ ಕೋವಿಡ್‌ ಲಸಿಕೆ ಹಾಕಿಸಲಾಗುತ್ತಿದೆ. ನಿಯಮ ಪಾಲನೆಗೆ ಜಾಗೃತಿ ಮೂಡಿಸಲಾಗುತ್ತಿದೆ.
-ಶ್ವೇತಾ ಸಂಗಂ, ಕಾರ್ಮಿಕ ಅಧಿಕಾರಿ, ಯಾದಗಿರಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.