ADVERTISEMENT

ಯಾದಗಿರಿ: ಜಿಲ್ಲೆಯ ಕಲ್ಯಾಣಿಗಳಿಗೆ ಮರುಜೀವ

20ಕ್ಕೂ ಹೆಚ್ಚು ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ ಮುಕ್ತಾಯ

ಬಿ.ಜಿ.ಪ್ರವೀಣಕುಮಾರ
Published 19 ಜುಲೈ 2020, 19:30 IST
Last Updated 19 ಜುಲೈ 2020, 19:30 IST
ಯಾದಗಿರಿ ಜಿಲ್ಲೆಯ ಹೆಗ್ಗನದೊಡ್ಡಿಯಲ್ಲಿ ಪುನಶ್ಚೇತನಗೊಂಡ ಕಲ್ಯಾಣಿ
ಯಾದಗಿರಿ ಜಿಲ್ಲೆಯ ಹೆಗ್ಗನದೊಡ್ಡಿಯಲ್ಲಿ ಪುನಶ್ಚೇತನಗೊಂಡ ಕಲ್ಯಾಣಿ   

ಯಾದಗಿರಿ: ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ಪುರಾತನ ಕಲ್ಯಾಣಿಗಳನ್ನು ಪುನಶ್ಚೇತಗೊಳಿಸಲುಕೈಗೆತ್ತುಕೊಂಡಿದ್ದು, 60ರಲ್ಲಿ 20ಕ್ಕೂ ಹೆಚ್ಚು ಕಲ್ಯಾಣಿಗಳ ಕಾಮಗಾರಿ ಮುಗಿದಿವೆ. ಇನ್ನುಳಿದ ಕಲ್ಯಾಣಿಗಳುಆಗಸ್ಟ್‌ನಲ್ಲಿ ಮುಕ್ತಾಯವಾಗಲಿವೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೊಂಡಿದ್ದು, ಸ್ಥಳೀಯರಿಗೆ ಇದರಿಂದಉದ್ಯೋಗ ಲಭಿಸಿದೆ.ಪ್ರಥಮ ವಚನಕಾರ ದೇವರ ದಾಸಿಮಯ್ಯ ಅವರ ಊರಾದ ಕೆಂಭಾವಿ ಸಮೀಪದ ಮುದನೂರಿನಿಂದ ಕಲ್ಯಾಣಿಗಳ ಪುನಶ್ಚೇತನವನ್ನು ಆರಂಭಿಸಲಾಗಿದೆ.

ಹುಣಸಗಿ ತಾಲ್ಲೂಕಿನ ಕೋಡೆಕಲ್ಲದ ಕೆಂಡದಬಾವಿ ಕಲ್ಯಾಣಿ, ಸುರಪುರ ತಾಲ್ಲೂಕಿನಹೆಗ್ಗಣದೊಡ್ಡಿ ಕಲ್ಯಾಣಿ,ಬಾದ್ಯಾಪುರ ಕಲ್ಯಾಣಿ,ಎಸ್‌.ಎಚ್‌.ಖಾನಾಪುರದಕೊಟ್ಟಾರ ಬಸವೇಶ್ವರ ಕಲ್ಯಾಣಿ, ಶಹಾಪುರದ ಕುರಕುಂದ ಕಲ್ಯಾಣಿ ಸೇರಿದಂತೆ ಹಲವಾರು ಕಲ್ಯಾಣಿಗಳು ಪುನಶ್ಚೇತನಗೊಂಡಿವೆ.

ADVERTISEMENT

‘ಯಾದಗಿರಿ ಜಿಲ್ಲೆ ಉದ್ಯೋಗ ಖಾತ್ರಿ ಯೋಜನೆಯಡಿ 2019-20 ನೇ ಸಾಲಿನಲ್ಲಿ ರಾಜ್ಯದಲ್ಲಿ 'ಮೊದಲ ಸ್ಥಾನಕ್ಕೆ' ಏರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.ರಾಜ್ಯದಲ್ಲಿಯೇ ಅತಿ ಹೆಚ್ಚು ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮ ಕೈಗೊಂಡ ಜಿಲ್ಲೆ ಎಂದು ಹೆಸರು ಪಡೆದಿದ್ದೇವೆ’ ಎಂದುಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಹೇಳುತ್ತಾರೆ.

‘ಕಲ್ಯಾಣಿಯ ಗಾತ್ರಕ್ಕನುಗುಣವಾಗಿ ಒಂದೂವರೆ ಲಕ್ಷದಿಂದ ಐದು ಲಕ್ಷಗಳವರೆಗೆ ಖರ್ಚು ಭರಿಸಲಾಗುತ್ತಿದೆ. 20ಕ್ಕೂ ಹೆಚ್ಚು ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ ಮುಕ್ತಾಯಗೊಂಡಿವೆ. ಉಳಿದವು ತಿಂಗಳಲ್ಲಿ ಮುಗಿಯಲಿವೆ.ಕಾಳೆಬೆಳಗುಂದಿ, ಗಾಜರಕೋಟ ಮತ್ತು ಮುದನೂರಿನ ಕಲ್ಯಾಣಿಗಳು ಬೃಹತ್ ಪ್ರಮಾಣ ಕಲ್ಯಾಣಿಗಳಾಗಿವೆ. ಇಂಥ ದೊಡ್ಡ ಕಲ್ಯಾಣಿಗಳಿಗೆ ಐದು ಲಕ್ಷಗಳವರೆಗೆ ಖರ್ಚು ಭರಿಸಲಾಗುತ್ತದೆ. ಮನರೆಗಾ ಯೋಜನೆಯಡಿ ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಯು ಸಿಮೆಂಟ್, ಕಬ್ಬಿಣ ಮುಂತಾದ ಸಾಮಗ್ರಿಗಳನ್ನು ಒಳಗೊಳ್ಳುವುದರಿಂದ 80:20ರ ಸಾಮಗ್ರಿ, ಕೂಲಿ ಅನುಪಾತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ನಾಯ್ಕಲ್, ರಸ್ತಾಪುರ, ಮುದನೂರು, ಗಾಜರಕೋಟ್ ಮತ್ತು ಕಾಳೆಬೆಳಗುಂದಿ ಕಲ್ಯಾಣಿಗಳನ್ನು ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ನೋಡಿ ಇವುಗಳನ್ನು ದುರಸ್ತಿ ಮಾಡಬೇಕು ಎಂದು ತಿಳಿಸಿದ್ದರು. ಅಂದಿನಿಂದ ಈ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ರಸ್ತಾಪುರದಶಾರದಹಳ್ಳಿ ಗ್ರಾಮದ ಕಲ್ಯಾಣಿ ಪುನಶ್ಚೇತನ ಕಾಮಗಾರಿಗೆ ₹5 ಲಕ್ಷ ವೆಚ್ಚ ಮಾಡಲಾಗಿದೆ. ಅದರಲ್ಲಿ ಕೂಲಿ ಮೊತ್ತ₹1.53 ಲಕ್ಷ,ಸಾಮಗ್ರಿ ಮೊತ್ತ₹3.47 ಲಕ್ಷ ಆಗಿದೆ. ಫೆಬ್ರುವರಿ 19ರಿಂದ ಕಾಮಗಾರಿ ಆರಂಭಗೊಂಡು ಮೇ 21ಕ್ಕೆ ಮುಕ್ತಾಯವಾಗಿದೆ.

***

ಜಿಲ್ಲೆಯಲ್ಲಿ 60 ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ ಈಗಾಗಲೇ 57 ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ
ಮುಕ್ಕಣ್ಣ ಕರಿಗಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.